ಕಾಂಗ್ರೆಸ್ಸಿನಲ್ಲೂ ಶುರು ಲಿಂಗಾಯತ ಒಕ್ಕಲಿಗ ವಿ'ಭಜನೆ'

ಹಿರಿಯ ನಾಯಕ, ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ತಮ್ಮ ನಿವಾಸದಲ್ಲಿ ಪಕ್ಷದಲ್ಲಿನ ಒಕ್ಕಲಿಗ ನಾಯಕರಿಗಾಗಿ ಸಭೆ ನಡೆಸಿ, ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದೆಡೆ, ಪಕ್ಷದಲ್ಲಿ ವೀರಶೈವ ನಾಯಕರು ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಹೋಟೆಲ್ ಏಟ್ರಿಯಾದಲ್ಲಿ ಸಭೆ ನಡೆಸಿದ್ದಾರೆ.
ಆದರೆ ಎರಡೂ ಭಿನ್ನ ಬಣಗಳ ಸಮಾನಾಂತರ ಗುರಿ ಒಂದೇ ಆಗಿದೆ. ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ತಕ್ಷಣದಿಂದಲೇ ತಮ್ಮ ಬಣಕ್ಕೆ ದಕ್ಕಿಸಿಕೊಳ್ಳುವುದು ಈ ಎರಡೂ ಭಿನ್ನ ಸಭೆಗಳ ಧ್ಯೇಯೋದ್ದೇಶವಾಗಿದೆ.
ಕುತೂಹಲದ ಸಂಗತಿಯೆಂದರೆ ವಿ'ಭಜನೆ'ಯ ಹಾದಿಯಲ್ಲಿರುವ ಲಿಂಗಾಯತ, ಒಕ್ಕಲಿಗ ಬಣಗಳು ಸಂಜೆ ವೇಳೆಗೆ ಪ್ರತ್ಯೇಕ ಸಭೆಗಳನ್ನು ನಡೆಸುವುದಕ್ಕೂ ಮುನ್ನ 'ನಾವೆಲ್ಲ ಒಂದು' ಎಂಬಂತೆ ಅಖಂಡ ಕಾಂಗ್ರೆಸ್ ನಾಯಕರು ನಗರದ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಬೆಂಗಳೂರು ನಗರ ಜಿಲ್ಲಾ ಘಟಕದ ಬೂತ್, ವಾರ್ಡ್ ಮತ್ತು ಪಂಚಾಯ್ತಿ ಸಮಿತಿಗಳ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಎಂ ಕೃಷ್ಣ ಅವರು ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ''ಒಕ್ಕಲಿಗ ಶಾಸಕರಿಗೆ'' ವಿಶೇಷ ಭೋಜನ ಕೂಟ ಏರ್ಪಡಿಸಿದ್ದಾರೆ. ಶಾಸಕರಾದ ಕೃಷ್ಣ ಭೈರೇಗೌಡ, ಡಾ. ಸುಧಾಕರ್, ಎ. ಮಂಜು, ಸುರೇಶ್ ಗೌಡ, ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ, ಕೆಬಿ ಚಂದ್ರಶೇಖರ್, ರುದ್ರೇಗೌಡ ಸೇರಿ ಪ್ರಮುಖ ಒಕ್ಕಲಿಗರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.
ಒಕ್ಕಲಿಗರ ಒಕ್ಕೊರಲ ಆಗ್ರಹ : ಕೃಷ್ಣ ಅವರು ಬಡಿಸಿದ ಭೋಜನದ ಸವಿವುಂಡುತ್ತಾ 'ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಬೇಕು. ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕು. ಹೇಗೂ ಹೈಕಮಾಂಡ್ ಸಹ ನಿಮ್ಮ ಪರವೇ ಒಲವು ತಾಳಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. 1999ರ ಮಾದರಿಯಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕು' ಎಂದು ಒಕ್ಕಲಿಗ ನಾಯಕರು ಒಕ್ಕೊರಲ ಧ್ವನಿಯಲ್ಲಿ ಮೊರೆಯಿಟ್ಟಿದ್ದಾರೆ.
ವೀರಶೈವರ ವೀರಾವೇಶದ ಮಾತು: ಇದಕ್ಕೆ ವ್ಯತಿರಿಕ್ಯವಾಗಿ ಹೋಟೆಲ್ ಏಟ್ರಿಯಾದಲ್ಲಿ ಸಭೆ ನಡೆಸಿದ ವೀರಶೈವ ನಾಯಕರು ವೀರಾವೇಶದ ಮಾತುಗಳನ್ನಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರಿಗೇ ಕೆಪಿಸಿಸಿ ಪಟ್ಟ ಕಟ್ಟಬೇಕು ಎಂದಿದ್ದಾರೆ. ವೀರಶೈವರ ಸಭೆಯಲ್ಲಿ ಡಾ. ಶರಣ ಪ್ರಕಾಶ್ ಪಾಟೀಲ್, ಬಿಸಿ ಪಾಟೀಲ್, ಡಾ. ಎಬಿ ಮಲಕಾರೆಡ್ಡಿ, ಅಶೋಕ್ ಪಟ್ಟಣ್ಣ, ಹಿರಿಯ ನಾಯಕರಾದ ಎಂವಿ ರಾಜಶೇಖರನ್, ವೀರಣ್ಣ ಮತ್ತಿಕಟ್ಟಿ, ಅಲ್ಲಂ ವೀರಭದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಒಮ್ಮೆ ಸಿದ್ದರಾಮಯ್ಯ ಅವರೂ ಬಂದು ಹೋಗಿದ್ದು ವಿಶೇಷವಾಗಿತ್ತು.
ಅದಷ್ಟು ಬೇಗ ಮೇಡಂ ಸೋನಿಯಾ ಅವರ ಬಿಡುವು ನೋಡಿಕೊಂಡು ವೀರಶೈವರೆಲ್ಲ ಒಟ್ಟಾಗಿ ತೆರಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.
ಸಭೆಯ ಬಳಿಕ ಮಾತನಾಡಿದ ಅಲ್ಲಂ ವೀರಭದ್ರಪ್ಪ ಮತ್ತು ಎಂವಿ ರಾಜಶೇಖರನ್ ಅವರುಗಳು ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಾವು ಒಂದಾಗಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡಿಗೆ ಮನವಿ ಮಾಡುವುದಾಗಿ ಘೋಷಿಸಿದ್ದಾರೆ.












Click it and Unblock the Notifications