'ಪವರ್'ಫುಲ್ ಮೊಯ್ಲಿ ಕರ್ನಾಟಕಕ್ಕೆ ಏನಾದ್ರೂ ಮಾಡ್ತಾರಾ?
ಆದರೆ ಕೇಂದ್ರ ಮಟ್ಟದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾಗಿರುವ ವೀರಪ್ಪ ಮೊಯ್ಲಿ ಈ ಸದವಕಾಶ ಬಳಸಿಕೊಂಡು ತಮ್ಮ ತಾಯ್ನಾಡಿಗೆ ಏನಾದರು ಸ್ವಲ್ಪ ಜನ ಸೇವೆ ಮಾಡುತ್ತಾರಾ? ಅದರಲ್ಲೂ ರಾಜ್ಯದ ವಿದ್ಯುತ್ ಪರಿಸ್ಥಿತಿ ಅಯೋಮಯವಾಗಿರುವಾಗ ಕೇಂದ್ರದಿಂದ ಸ್ವಲ್ಪ ಹೆಚ್ಚಿನ ನೆರವು ಗಳಿಸಿಕೊಡುತ್ತಾರಾ ಎಂದು ದಕ್ಷಿಣ ಕನ್ನಡದ ಮತ್ತೊಂದು ಕಂದಮ್ಮ ಶೋಭಾ ಕರಂದ್ಲಾಜೆ ಅವರು crossed fingers ಮಾಡಿಕೊಂಡು ಕೇಳುತ್ತಿದ್ದಾರೆ.
(ಉತ್ತರ) ಭಾರತದಲ್ಲಿ ವಿದ್ಯುತ್ತಿಗೆ ತತ್ವಾರ ಬಂದಿರುವಾಗ ಅಕ್ಷರಶಃ ಕತ್ತಲೆಯಲ್ಲೇ ಅಧಿಕಾರ ವಹಿಸಿಕೊಂಡಿರುವ (ದಕ್ಷಿಣ) ಕನ್ನಡದವರೇ ಆದ ಮೊಯ್ಲಿ ಸಾಹೇಬರು ನಿನ್ನೆಯಿಂದ ವಿದ್ಯುತ್ ಸಚಿವರೂ ಆಗಿದ್ದಾರೆ. ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ನಮ್ಮ ರಾಜ್ಯ ಸಹಜವಾಗಿಯೇ ಮೊಯ್ಲಿ ಅವರತ್ತ ಅಪಾರ ನಿರೀಕ್ಷೆಯಿಂದ ನೋಡುತ್ತಿದೆ. ಮೊಯ್ಲಿ ಸಾಹೇಬರು ಕರ್ನಾಟಕದತ್ತ ಕಣ್ಣು ಬಿಡುತ್ತಾರಾ ಎಂಬುದಷ್ಟೇ ಈಗಿನ ಪ್ರಶ್ನೆ.
ಗಮನಾರ್ಹವೆಂದರೆ ಸದ್ಯದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬೇಕಾಗಿದೆ. ಸೋ, ರಾಜ್ಯದಲ್ಲಿ ಅಧಿಕಾರ ಬರ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ಮಾದರಿಯಲ್ಲಿ ಚುನಾವಣೆ ವರ್ಷದಲ್ಲಿ ಕೇಂದ್ರದ ವತಿಯಿಂದ ಮೊಯ್ಲಿ ಸಾಹೇಬರು ಹೆಚ್ಚಿನ ಸ್ಪಂದನೆ ದೊರಕಿಸಲಿ. ಒಂದಷ್ಟು ಶಾಶ್ವತ ಯೋಜನೆಗಳನ್ನೂ ಕೈಗೊಳ್ಳಲಿ ಎಂದು ನಾಡಿನ ಜನತೆ ನಿರೀಕ್ಷಿಸುತ್ತಿದ್ದಾರೆ.
ಕೇಂದ್ರದ ಗ್ರಿಡ್ ನಿಂದ ಕರ್ನಾಟಕಕ್ಕೆ ಹಂಚಿಕೆಯಾಗುತ್ತಿರುವ ವಿದ್ಯುತ್ ಪ್ರಮಾಣ ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ 'ಅನ್ಯಾಯ'ವಾಗಿದೆ ಎಂಬುದು ಮೇಡಂ ಶೋಭಾ ಅವರ ಪುರಾತನ ಕೂಗು, ಕೊರಗು. ರಾಜ್ಯಕ್ಕೆ 1700 MW ಹಂಚಿಕೆಯಾಗಿದೆ. ಆದರೆ ಅದಷ್ಟೂ ಪೂರೈಕೆಯಾಗಿಲ್ಲ. ಮೊಯ್ಲಿ ಸಾಹೇಬರು ಈ ಹಂಚಿಕೆ ತಾರತಮ್ಯವನ್ನು ಸರಿಪಡಿಸುತ್ತಾರಾ? ಅದೇ ಕನ್ನಡಿಗರನ್ನು ಕಾಡುತ್ತಿರುವ ಪ್ರಶ್ನೆ.
ಮತ್ತೊಂದು ವಿಷ್ಯ: ರಾಜ್ಯದ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಸಮಸ್ಯೆಯಿದೆ. ಅದೇನು ಭಾಷಾ ಸಮಸ್ಯೆಯೋ ಏನೋ? ಮೇಡಂ ಶೋಭಾ ಏನು ಕೇಳಿದರೋ? ಹಿಂದಿನ ವಿದ್ಯುತ್ ಸಚಿವ ಸುಶೀಲ್ ಕುಮಾರ್ ಶಿಂಧೆ ಏನು ಹೇಳಿದರೋ? ರಾಜ್ಯಕ್ಕಂತೂ ಅಗತ್ಯವಿರುವಷ್ಟು ಕಲ್ಲಿದ್ದಲು ಮಾತ್ರ ಬರಲೇ ಇಲ್ಲ. ಆದ್ದರಿಂದ ಈಗ ಮೇಡಂ ಶೋಭಾ ಅವರು ಅಚ್ಚ ಕನ್ನಡದಲ್ಲಿಯೇ 'ಮೊಯ್ಲಿ ಸಾಹೇಬರೇ, ಪಕ್ಷ ಬೇಧ ಮರೆತು ನಮ್ಮ ಕನ್ನಡಿಗರತ್ತ ಕರುಣೆ ತೋರಿ' ಎಂದು ಕೇಳಬಹುದಲ್ವೇ? (ಪಕ್ಷ ಬೇದ ಬೋಡ್ಚಿ ಮೋಯ್ಲಿ ಸಾಹೇಬರೇ, ನಮ್ಮ ಕನ್ನಡಿಗರೆನಾ ಮಿತ್ ಪನಿತ್ ಕರುಣೆ ಇಪ್ಪಡ್...)