ಊಟ ಹಾಕಿದವನನ್ನೇ ಕೊಂದ 'ಟೈಗರ್' ರಾಜ

ಮೃತ ವ್ಯಕ್ತಿಯನ್ನು ಕುಶಾಲಪ್ಪ ಗೌಡ(40) ಎಂದು ಗುರುತಿಸಲಾಗಿದೆ. ದಾಳಿ ಮಾಡಿದ ಗಂಡು ಹುಲಿಯ ಹೆಸರು ರಾಜಾ ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕುಶಾಲಪ್ಪ ಅವರು ಹುಲಿಗೆ ಆಹಾರ ನೀಡಲು ತೆರಳಿದ್ದಾರೆ. ಹುಲಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ಆಹಾರ ನೀಡುವುದು ಅವರ ಎಂದಿನ ಕಾಯಕ. ಕುಶಾಲಪ್ಪ ಬೋನಿಗೆ ಪ್ರವೇಶಿಸಿದ ಅವರ ಮೇಲೆ ಹುಲಿ ದಾಳಿ ಮಾಡಿದ್ದು, ಕುಶಾಲಪ್ಪ ಅವರ ಕುತ್ತಿಗೆಯ ಭಾಗಕ್ಕೆ ಬಲವಾದ ಗಾಯವಾದ್ದರಿಂದ ಕುಶಾಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವನ್ಯ ಜೀವಿ ಸಂಗ್ರಹಾಲಯದ ಕಾಯಿದೆಗಳ ಪ್ರಕಾರ ವನ್ಯ ಜೀವಿಗಳಿಗೆ ಆಹಾರ ಅಥವಾ ಔಷಧಿ ನೀಡುವಾಗ ಸಂಗ್ರಹಾಲಯದ ಅಧಿಕಾರಿಗಳಿಂದ ಸೂಚಿಸಲ್ಪಟ್ಟ ಅಧಿಕೃತ ಮೂರು ವ್ಯಕ್ತಿಗಳು ಇರಬೇಕಾಗುತ್ತದೆ. ಆದರೆ ಕುಶಾಲಪ್ಪ ಒಬ್ಬರೇ ಇಲ್ಲಿ ಆಹಾರ ಮತ್ತು ಔಷಧಿ,ಚಿಕಿತ್ಸೆ ನೀಡಲು ತೆರಳಿರುವುದು ಪ್ರಮಾದವಾಗಿದೆ.
ಪಿಲಿಕುಳ ನಿಸರ್ಗಧಾಮದ ಸುರಕ್ಷತೆಯ ಬಗ್ಗೆ ಈ ಘಟನೆ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ. ಕೆಲವು ವರ್ಷಗಳ ಹಿಂದೆ ನಿಸರ್ಗಧಾಮದಲ್ಲಿ ಶಾಲಾ ವಿದ್ಯಾರ್ಥಿಗಳು ದೋಣಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿತ್ತು. ನಂತರ ನಿಸರ್ಗಧಾಮದ ಸುರಕ್ಷತೆಯನ್ನು ಹೆಚ್ಚಿಸುವ ಭರವಸೆ ನೀಡಲಾಗಿತ್ತು.
ಆದರೆ, ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಅನುಮಾನ ಮೂಡಲಾರಂಭಿಸಿದೆ. ಸಿಬ್ಬಂದಿಗಳನ್ನು ಪ್ರಾಣಿಗಳು ಕೊಲ್ಲುವಷ್ಟರ ಮಟ್ಟಿಗೆ ಪ್ರಾಣಿಗಳಿಗೆ ಅನಾರೋಗ್ಯ ಕಾಡುತ್ತಿತ್ತೆ? ಸಾರ್ವಜನಿಕರು ಸುರಕ್ಷಿತವಾಗಿ ಪಿಲಿಕುಳ ಪ್ರವೇಶಿಸಬಹುದೇ? ಎಂಬ ಪ್ರಶ್ನೆಗಳು ಕಾಡುತ್ತಿದೆ.
ವಿಟ್ಲ ನಿವಾಸಿಯಾದ ಕುಶಾಲಪ್ಪ ಅವರ ಮೃತ ದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕಾವೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.












Click it and Unblock the Notifications