ಕಾರ್ಗಿಲ್ ಹುತಾತ್ಮ ಕುಟುಂಬಗಳಿಗೆ ಕರ್ನಾಟಕ ಕೊಡುಗೆ
ದೇಶಕೋಸ್ಕರ ಹುತಾತ್ಮರಾದ ಕನ್ನಡಿಗರ ಕುಟುಂಬಗಳಿಗೆ 10 ವರ್ಷಗಳ ತನಕ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಉಚಿತ ಬಸ್ ನೀಡಲು ಸರ್ಕಾರ ಆದೇಶ ಹೊರಡಿಸಲಿದೆಎಂದು ವಿಧಾನಪರಿಷತ್ತಿನಲ್ಲಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಆರ್ ಅಶೋಕ್ ಅವರು ಘೋಷಿಸಿದರು.
ಈ ಯೋಜನೆ ಪ್ರಕಾರ ಹುತಾತ್ಮ ಸೈನಿಕರ ತಂದೆ, ತಾಯಿ ಮತ್ತು ಅವರ ಪತ್ನಿ ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಈ ಬಗ್ಗೆ ಸರ್ಕಾರ ತಕ್ಷಣವೇ ಆದೇಶ ಹೊರಡಿಸಲಿದೆ ಎಂದು ಅಶೋಕ್ ಹೇಳಿದರು.
ಈ ಹಿಂದೆ ರಾಜ್ಯ ಸರ್ಕಾರ ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಪ್ರಯಾಣಿಸಲು ಯೋಧರ ಕುಟುಂಬಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಈ ಸೌಲಭ್ಯವನ್ನು ವಿಸ್ತರಿಸುವಂತೆ ಹಲವು ದಿನಗಳಿಂದ ಸರ್ಕಾರಕ್ಕೆ ಬೇಡಿಕೆ ಬಂದಿತ್ತು.
ಇದಕ್ಕೂ ಮುನ್ನ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, ಕಾರ್ಗಿಲ್ ಯುದ್ಧದಲ್ಲಿ 360 ಯೋಧ ಕನ್ನಡಿಗರು ಮಡಿದಿದ್ದಾರೆ. ಆದರೆ, ಅವರ ಕುಟುಂಬಗಳಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡಿದರೂ ಸಾಲದು. ಸದ್ಯ ಕಾರ್ಗಿಲ್ ವೀರಯೋಧರ ಕುಟುಂಬಗಳಿಗೆ ಸರ್ಕಾರ ಬಿಎಂಟಿಸಿ ಬಸ್ಪಾಸ್ ಮಾತ್ರ ನೀಡಿದೆ.
ಆದರೆ, ಬೆಂಗಳೂರಿನಲ್ಲಿ ವಾಸಿಸುತ್ತಿರುವುದು ತುಂಬಾ ಕಡಿಮೆ. ಗ್ರಾಮಿಣ ಪ್ರದೇಶದಲ್ಲೇ ಹೆಚ್ಚಾಗಿರುವುದು. ಈ ಹಿನ್ನೆಲೆಯಲ್ಲಿ ಅವರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಓಡಾಡಲು ಉಚಿತ ಬಸ್ಪಾಸ್ ನೀಡಬೇಕು. ಅದನ್ನು ಜು.26ರಂದು ಆಚರಿಸುವ ಕಾರ್ಗಿಲ್ ವಿಜಯೋತ್ಸವದ ದಿನದೊಳಗೆ ಸರ್ಕಾರ ಘೋಷಿಸುವಂತೆ ಅವರು ಆಗ್ರಹಿಸಿದ್ದರು.
ಡ್ರಾಸ್ (ಜಮ್ಮು-ಕಾಶ್ಮೀರ): 1999ರ ಕಾರ್ಗಿಲ್ ವಿಜಯದ 13ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಬುಧವಾರ ಜಮ್ಮು-ಕಾಶ್ಮೀರದ ಡ್ರಾಸ್ ಉಪವಿಭಾಗದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ ತಾಣದಲ್ಲಿ 15 ಕೆ.ಜಿ. ತೂಕದ ಬೃಹತ್ ತ್ರಿವರ್ಣ ಧ್ವಜವೊಂದು ಆರೋಹಣ ಮಾಡುವ ಮೂಲಕ ಎರಡು ದಿನಗಳ ಸಂಭ್ರಮಾಚರಣೆಗೆ ಬುಧವಾರ(ಜು.24) ಚಾಲನೆ ನೀಡಲಾಗಿದೆ.
37.5 ಅಡಿ ಉದ್ದ ಮತ್ತು 25 ಅಡಿ ಅಗಲವಿರುವ ರಾಷ್ಟ್ರಧ್ವಜವು 15 ಕೆ.ಜಿ. ತೂಕವಿದೆ ಎಂದು ಭಾರತೀಯ ರಾಷ್ಟ್ರಧ್ವಜ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಮಾಂಡರ್ (ನಿವೃತ್ತ) ಕೆ.ವಿ. ಸಿಂಗ್ ಅವರು ತಿಳಿಸಿದರು.
ಮೂರು ಟನ್ ಭಾರ ಮತ್ತು 101 ಅಡಿ ಎತ್ತರವಿರುವ ವಿಶೇಷವಾಗಿ ನಿರ್ಮಿಸಲಾಗಿರುವ ಸ್ತಂಭದ ಮೇಲೆ ಈ ಧ್ವಜವನ್ನು ಹಾರಿಸಲಾಗಿದೆ. ಭೂಮಿಯೊಳಗೆ 15 ಅಡಿಗಳಷ್ಟು ಆಳಕ್ಕೆ ಕಂಬವನ್ನು ಹೂಳಲಾಗಿದೆ.
ಸೇನೆಯ ನಾರ್ಥರ್ನ್ ಕಮಾಂಡ್ ನ ಜನರಲ್ ಕಮಾಂಡಿಂಗ್ ಇನ್ ಚೀಫ್ ಲೆ.ಜ. ಕೆ.ಟಿ. ಪರ್ನಾಯಕ್ ಮತ್ತು ಧ್ವಜ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಸಂಸದ ನವೀನ್ ಜಿಂದಾಲ್ ಧ್ವಜಾರೋಹಣವನ್ನು ನೆರವೇರಿಸಿದರು.