ಕೆಪಿಎಸ್ಸಿ ಕಚೇರಿ ಸ್ಫೋಟಿಸುವ ಬೆದರಿಕೆ ಕರೆ

ಮಧ್ಯಾಹ್ನ 2.30ಕ್ಕೆ ಕೆಪಿಎಸ್ಸಿಯ ಕಾರ್ಯದರ್ಶಿ ವಿ.ಬಿ. ಪಾಟೀಲ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಸಂಜೆ 4 ಗಂಟೆಗೆ ಬಾಂಬ್ ಸ್ಫೋಟಿಸುವ ಕರೆ ಬಂದಿತ್ತು. ಆದರೆ, ನಾಲ್ಕುವರೆವರೆಗೆ ಕೆಪಿಎಸ್ಸಿ ಕಚೇರಿಯ ಎಲ್ಲ ನಾಲ್ಕು ಅಂತಸ್ತುಗಳನ್ನು ಜಾಲಾಡಿದರೂ ಯಾವುದೇ ಬಾಂಬ್ ಸಿಗದಿದ್ದ ಕಾರಣ ಅದು ಹುಸಿ ಬೆದರಿಕೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದರು.
ಬಾಂಬ್ ಬೆದರಿಕೆಯ ಕರೆ ಬಂದ ಕೂಡಲೆ ಕಾರ್ಯದರ್ಶಿಯವರು ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧ ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದರು. ಕೂಡಲೆ ಆಯೋಗದ ಕಚೇರಿಗೆ ಧಾವಿಸಿದ ಕಬ್ಬನ್ ಪಾರ್ಕ್ ಎಸಿಪಿ ದೇವರಾಜ್ ಅವರು ಪೊಲೀಸ್ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ಹಾಗು ಶ್ವಾನದಳದ ಸಿಬ್ಬಂದಿಯೊಡನೆ ಸೇರಿ, ಎಲ್ಲ ನೌಕರರನ್ನು ಕಟ್ಟಡದಿಂದ ಹೊರಗೆ ಕಳಿಸಿ ಸಾಕಷ್ಟು ಹುಡುಕಾಟ ನಡೆಸಿದರು.
ಎಲ್ಲ ಅನುಮಾನಾಸ್ಪದ ಸ್ಥಳ, ವಸ್ತುಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ಜಾಲಾಡಲಾಯಿತು. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ವಿಚಾರಿಸಲಾಯಿತು. ಆದರೂ, ಅಪರಿಚಿತ ವ್ಯಕ್ತಿ ಹೇಳಿದಂತೆ ಬಾಂಬ್ ಸ್ಫೋಟಿಸಲೂ ಇಲ್ಲ, ಯಾವ ಮೂಲೆಯಲ್ಲಿ ಕೂಡ ಬಾಂಬ್ ಸಿಗಲೂ ಇಲ್ಲ. ಯಾರೋ ಕಿಡಿಗೇಡಿ ಬಾಂಬ್ ಸ್ಫೋಟಿಸುವ ಬೆದರಿಕೆ ಒಡ್ಡಿರಬಹುದೆಂದು ಕಡೆಗೆ ಪೊಲೀಸರು ತೀರ್ಮಾನಕ್ಕೆ ಬಂದರು. ಬಾಂಬ್ ಬೆದರಿಕೆ ಒಡ್ಡಿದ ವ್ಯಕ್ತಿಯ ಹುಡುಕಾಟದಲ್ಲಿ ಈಗ ಪೊಲೀಸರು ತೊಡಗಿದ್ದಾರೆ.












Click it and Unblock the Notifications