ಜೈಲಿನಿಂದ ಹೊರಬಿದ್ದ ವಿಠಲ ಮಲೆಕುಡಿಯ
50,000 ರು ಬಾಂಡ್ ಸಲ್ಲಿಸಬೇಕು, ಸಾಕ್ಷ್ಯ ನಾಶ ಪಡಿಸಬಾರದು, ವಿಚಾರಣೆಗೆ ಪೊಲೀಸರು ಕರೆದಾಗ ಬರಬೇಕು, ಭಾನುವಾರ ಹಗಲು ಹೊತ್ತು ವೇಣೂರು ಪೊಲೀಸ್ ಠಾಣೆಯಲ್ಲಿರಬೇಕು. ದೇಶಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಿ ನ್ಯಾ. ವಿಜೇಶ್ ಅವರು ವಿಠಲ ಹಾಗೂ ಅವನ ತಂದೆ ಲಿಂಗಪ್ಪ ಅವರಿಗೆ ಜಾಮೀನು ಮಂಜೂರು ಮಾಡಿದರು. ಜೂ.20ರಂದು ಹೈಕೋರ್ಟಿನಲ್ಲಿ ವಿಠಲ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ಕುತ್ಲೂರು ಗ್ರಾಮದ ಅಲಂಬ ಪರಿಸರದ ಮಣಿಲ ನಿವಾಸಿಯಾಗಿರುವ ಲಿಂಗಣ್ಣ ಮಲೆಕುಡಿಯ ಹಾಗೂ ಅವರ ಪುತ್ರ ವಿಠ್ಠಲನನ್ನು ಬಂಧಿಸುವ ವೇಳೆ ಅವರಿಂದ ಕೇವಲ ಭಗತ್ ಸಿಂಗ್ ಬಗೆಗಿನ ಪುಸ್ತಕ ಹಾಗೂ ಕೆಲ ಮನೆ ಬಳಕೆಯ ಸಾಮಗ್ರಿಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿತ್ತು. ಅದರೂ ಇವರ ಮೇಲೆ ರಾಜ್ಯದ್ರೋಹ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿ ಬಂಧಿಸಿದ್ದರು.
ಪತ್ರಿಕೋದ್ಯಮ ವಿದ್ಯಾರ್ಥಿ ಕುತ್ಲೂರಿನ ವಿಠಲ ಮಲೆಕುಡಿಯ ಬಂಧನದಲ್ಲಿ ಪೊಲೀಸರು ಯಾವುದೇ ತಪ್ಪು ಎಸೆಗಿಲ್ಲ. ವಿಠಲ ನಕ್ಸಲ್ ಚಟುವಟಿಕೆಯನ್ನು ಬೆಂಬಲಿಸುತ್ತಿದ್ದ. ಆತನನ್ನು ಇದೇ ಕಾರಣಕ್ಕೆ ಬಂಧಿಸಲಾಗಿದೆ ಎಂದು ಅಂದಿನ ಡಿಜಿ ಐಜಿಪಿ ಎಆರ್ ಇನ್ಫಾಂಟ್ ಸ್ಪಷ್ಟಪಡಿಸಿದ್ದರು.
ಸರ್ಕಾರಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು, ವಿಠಲ ಹಾಗೂ ಆತನ ತಂದೆ ಈ ದೌರ್ಜನ್ಯಗಳಿಗೆ ಉತ್ತಮ ನಿದರ್ಶನಗಳಾಗಿದ್ದಾರೆ. ಪೊಲೀಸರು ಹಾಗೂ ಸರಕಾರಗಳು ಇನ್ನಾದರೂ ಈ ದೌರ್ಜನ್ಯವನ್ನು ನಿಲ್ಲಿಸಲಿ ಎಂದು ಸಿಪಿಎಂನ ಹಿರಿಯ ಮುಖಂಡ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ರಾಜ್ಯ ಸಂಚಾಲಕ ಜಿ.ಸಿ.ಬಯ್ಯಾ ರೆಡ್ಡಿ ಒತ್ತಾಯಿಸಿದ್ದಾರೆ.
ವಿಠಲನಿಗೆ ವಿವಿಯ ವಾರ್ಷಿಕ ಬರೆಯಲು ಅರಂಭದಲ್ಲಿ ಅನುಮತಿ ನಿರಾಕರಿಸಲಾಗಿದ್ದರೂ ಅಂತಿಮವಾಗಿ ನ್ಯಾಯಾಲಯದ ಆದೇಶದಂತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ವಿಠ್ಠಲನ ಬಂಧನದ ಬಳಿಕ ಆತನಿಂದ ಮಹತ್ವದ ಸುಳಿವುಗಳು ಲಭಿಸಿದೆ ಎಂದು ಪೊಲೀಸರು ಹೇಳುತ್ತಾ ಬಂದಿದ್ದರೂ ಚಾರ್ಜ್ಶೀಟ್ ಸಲ್ಲಿಸುವಲ್ಲಿ ಅನಗತ್ಯ ವಿಳಂಬ ಅನುಸರಿಸಿತ್ತು. ಚಾರ್ಜ್ಶೀಟ್ ಸಲ್ಲಿಕೆಗೆ ರಾಜ್ಯ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ಚಾರ್ಚ್ ಶೀಟ್ ಸಲ್ಲಿಕೆಯ ಕಾರ್ಯ ನಡೆದಿಲ್ಲ.
ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಆತನನ್ನು ಹಿಂಸಿಸಿ ಜೈಲಿಗೆ ತಳ್ಳಿದ್ದಾರೆ. ಇದೀಗ ಆತನಿಗೆ ಜಾಮೀನು ದೊರೆತಿರುವುದು ಸಂತಸ ತಂದಿದೆ. ಇನ್ನಾದರೂ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿ' ಎಂದು ಮಗನಿಗೆ ಜಾಮೀನು ದೊರೆತ ಸಂತಸದಲ್ಲಿ ಹಾಗೂ ನೋವಲ್ಲಿ ಆತನ ತಾಯಿ ಹೊನ್ನಮ್ಮ ಪ್ರತಿಕ್ರಿಯೆ ನೀಡಿದ್ದಾರೆ.