Get Updates
Get notified of breaking news, exclusive insights, and must-see stories!

ವಿರಳವಾಗುತ್ತಿರುವ ಮಾನವೀಯ ಸುದ್ದಿ: ಆಶಾ ಕೃಷ್ಣಸ್ವಾಮಿ

ಉಡುಪಿ, ಜು. 2 : ಈಚಿನ ದಿನಗಳಲ್ಲಿ ಮಾನವೀಯತೆಗೆ ಸಂಬಂಧಿಸಿದ ಸುದ್ದಿಗಳು ಕಡಿಮೆಯಾಗುತ್ತಿದ್ದು, ಕ್ರೈಂ ಸುದ್ದಿ ವೈಭವೀಕರಣಗೊಳ್ಳುತ್ತಿರುವುದು ಉತ್ತಮ ಲಕ್ಷಣವಲ್ಲ ಎಂದು ಬೆಂಗಳೂರು ಡೆಕನ್ ಹೆರಾಲ್ಡ್ ವಿಶೇಷ ವರದಿಗಾರ್ತಿ ಆಶಾ ಕೃಷ್ಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.

Asha Krishnaswamy, Shama Sundara and other in Udupi

ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕನ್ನಡದ ಪ್ರಥಮ ಪತ್ರಿಕೆ 'ಮಂಗಳೂರು ಸಮಾಚಾರ'ದ ಪ್ರಥಮ ಸಂಚಿಕೆಯ ಯಥಾ ನಕಲನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಪತ್ರಕರ್ತ ಯಾವುದೇ ಪ್ರಭಾವ, ಆಮಿಷಗಳಿಗೆ ಬಲಿಯಾಗದೆ ವಿಶ್ಲೇಷಣೆ ಕಡೆಗೆ ಹೆಚ್ಚಿನ ಗಮನ ನೀಡಿ, ಧನಾತ್ಮಕ ಸುದ್ದಿ ನೀಡಿದಾಗ ವರದಿಗಾರರಿಗೂ, ಓದುಗರಿಗೂ ಖುಷಿಯಾಗುತ್ತದೆ. ಆರ್‌ಟಿಐ, ಆರ್‌ಟಿಇ ಕಾಯ್ದೆ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುವುದೂ ಅಲ್ಲದೆ ಆ ಮೂಲಕ ಸುದ್ದಿಯ ನೈಜತೆಯನ್ನು ಕಂಡುಕೊಳ್ಳುವುದು ಅಗತ್ಯ. ಸತ್ಯವನ್ನು ಪ್ರಕಾಶಿಸುವುದೇ ಮಾಧ್ಯಮಗಳ ಮೂಲ ಉದ್ದೇಶ ಎಂದು ಅವರು ಹೇಳಿದರು.

ದೃಶ್ಯ ಮಾಧ್ಯಮವೂ ಸೇರಿದಂತೆ ಮಾಧ್ಯಮಗಳು ಅಪರಾಧ ಸುದ್ದಿಯನ್ನು ಪುನರಾವರ್ತಿಸುವ ಮೂಲಕ ಋಣಾತ್ಮಕ ವಿಚಾರಗಳಿಗೆ ಒತ್ತುನೀಡುವುದು ಸರಿಯಲ್ಲ. ಮಾಧ್ಯಮ ನಿರಂತರ ಕಲಿಕೆ ವಸ್ತುಗಳಾವಾಗಿದ್ದು, ಓದುಗರಿಗೆ ಈಗ ಸಾಕಷ್ಟು ಆಯ್ಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆಶಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯುನಿಕೋಡ್ ಅಳವಡಿಸಲೇಬೇಕು : ಹಿರಿಯ ಪತ್ರಕರ್ತ, 'ಒನ್‌ಇಂಡಿಯಾ ಡಾಟ್ ಇನ್' ಬೆಂಗಳೂರು ಸಂಪಾದಕ ಎಸ್. ಕೆ. ಶಾಮಸುಂದರ ಅವರು ಮಾತನಾಡಿ, ಮಾಧ್ಯಮದಲ್ಲಿ ತಂತ್ರಜ್ಞಾನವನ್ನು ಗರಿಷ್ಠ ರೀತಿಯಲ್ಲಿ ಬಳಸಬೇಕು. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಪತ್ರಕರ್ತ ಅಪ್ಡೇಟ್ ಆಗದಿದ್ದರೆ ಸತ್ವಯುತ ಬರವಣಿಗೆ ಕೊಡಲು ಸಾಧ್ಯವಾಗುವುದಿಲ್ಲ. ಅಂತರ್ಜಾಲದಲ್ಲಿ ಕನ್ನಡದ ಮಾಹಿತಿ ವಿರಳವಾಗಿದ್ದು, ಎಲ್ಲಾ ಪ್ರಮುಖ ಸುದ್ದಿ, ಜನಸಾಮಾನ್ಯರಿಗೆ ದೈನಂದಿನ ಅವಶ್ಯಕತೆಗಳಿಗೆ ಅನುಗುಣವಾಗಿ ಉಪಯೋಗವಾಗುವ ಸುದ್ದಿ ಬರಬೇಕಿದೆ ಎಂದರು.

ಕನ್ನಡದ ಅಭಿವೃದ್ಧಿಯಾಗಬೇಕಿದ್ದರೆ ಅಂತರ್ಜಾಲದಲ್ಲಿ, ಸರಕಾರದ ವೆಬ್ ಸೈಟುಗಳಲ್ಲಿ, ಕನ್ನಡದ ಎಲ್ಲ ಕೆಲಸಗಳಲ್ಲಿ ಯುನಿಕೋಡ್ ಅಳವಡಿಸಲೇಬೇಕು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ಅವರು ಶಿಫಾರಸು ಮಾಡಿದ್ದನ್ನು ಕಡೆಗಣಿಸಲಾಗಿದೆ. ಜನಸಾಮಾನ್ಯರಿಗೆ ಬೇಕಾಗಿರುವ ಅನೇಕ ಸರಕಾರಿ ಮಾಹಿತಿಗಳು ಕನ್ನಡದಲ್ಲಿ ಸಿಗುತ್ತಿಲ್ಲ. ಇದರಿಂದಾಗಿ ಅಂತರ್ಜಾಲದಲ್ಲಿ ಕನ್ನಡ ಅಭಿವೃದ್ಧಿಯಾಗುತ್ತಿಲ್ಲ, ಜನಪ್ರಿಯವಾಗುತ್ತಿಲ್ಲ ಎಂದು ಶಾಮ್ ವಿಷಾದ ವ್ಯಕ್ತಪಡಿಸಿದರು.

ಕೇರಳದಲ್ಲಿ, ತಮಿಳುನಾಡಿನಲ್ಲಿ, ಜರ್ಮನಿ, ಚೀನಾದಂಥ ದೇಶಗಳಲ್ಲಿ ಪ್ರಾದೇಶಿಕ ಭಾಷೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಚಿದಾನಂದ ಗೌಡರ ಶಿಫಾರಸಿನಂತೆ ಯುನಿಕೋಡ್ ಸ್ಟಾಂಡರ್ಡೈಸ್ ಮಾಡಲಾಗಿಲ್ಲ. ಆಂಗ್ಲ ಭಾಷೆಗಿಂತ ಕನ್ನಡ ಭಾಷೆಯಲ್ಲಿಯೇ ಎಲ್ಲ ಮಾಹಿತಿಗಳನ್ನು ಓದಲು ಜನರು ಇಷ್ಟಪಡುತ್ತಾರೆ. ಅಂತರ್ಜಾಲದಲ್ಲಿ ಇನ್ನೂ ಹೆಚ್ಚು ಕನ್ನಡ ಬಳಸುವಂತಾಗಬೇಕು ಎಂದು ಶಾಮಸುಂದರ ಅಪೇಕ್ಷಿಸಿದರು.

ಉಡುಪಿ ಸಹಾಯಕ ಪೋಲಿಸ್ ಅಧೀಕ್ಷಕ ಡಾ. ಪ್ರಭುದೇವ ಮಾನೆ, 'ಸಂಯುಕ್ತ ಕರ್ನಾಟಕ' ವರದಿಗಾರ ಕುಂದಗೋಳ ಪೇಪರ್ ಕಲ್ಲಪ್ಪನ ಪ್ರಾಮಾಣಿಕತೆಯನ್ನು ಸ್ಮರಿಸಿ, 20 ವರ್ಷಗಳ ಹಿಂದೆ ತಾಲೂಕಿಗೆ ಓರ್ವ ಪತ್ರಕರ್ತನಾಗಿ, ವಸ್ತುನಿಷ್ಠ ಸುದ್ದಿಗಾರನಾಗಿ ಸಲ್ಲಿಸಿದ ಸೇವೆ ಅಸಾಮಾನ್ಯ ಎಂದರು. ಪತ್ರಿಕಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿದರು. ಸಾಧಕ ಪತ್ರಕರ್ತರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘ ನೀಡಿದ 2012ನೇ ಸಾಲಿನ 'ಪತ್ರಿಕಾ ದಿನದ ಪುರಸ್ಕಾರ'ವನ್ನು ಹಿರಿಯ ಪತ್ರಕರ್ತ, ಯುಎನ್‌ಐ ವರದಿಗಾರ ಮಾಧವ ಆಚಾರ‍್ಯ ಅವರಿಗೆ ಪ್ರದಾನ ಮಾಡಲಾಯಿತು.

ಪತ್ರಕರ್ತರ ಸಂಘ ಅಧ್ಯಕ್ಷ ಕಿರಣ್ ಮಂಜನಬೈಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಕರ ಸುವರ್ಣ ಸ್ವಾಗತಿಸಿದರು. ಗಣೇಶ್ ಪ್ರಸಾದ್ ಪಾಂಡೇಲು ಪರಿಚಯಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪ್ರಸನ್ನ ಗಾಂವ್ಕರ್ ನಿರೂಪಿಸಿದರು. ಸಂಘದ ಸದಸ್ಯರು ಕ್ಲಿಕ್ಕಿಸಿದ ಆಯ್ದ ಛಾಯಾಚಿತ್ರಗಳ ಪ್ರದರ್ಶನ ಮತ್ತು ಪತ್ರಕರ್ತ ಕಟಪಾಡಿ ಪ್ರಕಾಶ ಸುವರ್ಣ ನಿರ್ದೇಶನದ ತುಳು ಚಲನಚಿತ್ರ 'ಭಾಗ್ಯ' ಪ್ರದರ್ಶನ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+