ಜಿಂದಾಲ್ ನಲ್ಲಿ ಯಡಿಯೂರಪ್ಪ-ಈಶ್ವರಪ್ಪ ಕುಶಲೋಪರಿ

ಅಂದಹಾಗೆ, ಮಾಜಿ ಸಿಎಂ ಸ್ಯದಕ್ಕೆ ಜಿಂದಾಲ್ ಆಸ್ಪತ್ರೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಇದು ಹೈಕೋರ್ಟ್ ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕಲ್ಪಿಸಿರುವ ವಿಶ್ರಾಂತಿ. ಬೆಂಗಳೂರು ಬಿಟ್ಟು ಎಲ್ಲೂ ಹೊರಹೋಗಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ. ಹಾಗಾಗಿ, ಬೆಂಗಳೂರಿನಿಂದ ಹೊರಹೋಗುವ ಎಲ್ಲ ರಸ್ತೆಗಳು ತಮಗೆ ಬಂದ್ ಆಗಿರುವುದರಿಂದ ಯಡಿಯೂರಪ್ಪ ನೆಲಮಂಗಲದತ್ತ ಹೆಜ್ಜೆಹಾಕಿದ್ದಾರೆ.
ಇತ್ತ ಪಕ್ಷದ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರ ಸಾರಂಗ್ ಮದುವೆಗೆ (ನಾಗಪುರದಲ್ಲಿ) ಖಾಸಗಿ ಕಾರಣವೊಡ್ಡಿ absent ಆದ ಈಶ್ವರಪ್ಪನವರು ಸೀದಾ ಜಿಂದಾಲಿಗೆ ತೆರಳಿ ಪುರಾತನ ಗೆಳೆಯ ಯಡಿಯೂರಪ್ಪ ಜತೆ ಏನೇನೋ ಮಾತುಕತೆ ನಡೆಸಿದ್ದಾರೆ. ಆದರೆ ಆ ಬಗ್ಗೆ ಇಬ್ಬರೂ ನಾಯಕರು ಬಾಯ್ಬಿಟ್ಟಿಲ್ಲ.
ಕುತೂಹಲದ ಸಂಗತಿಯೆಂದರೆ ಇದರ ಪರಿಣಾಮ ಮಾತ್ರ ಗೋಚರಿಸುತ್ತಿದೆ. ಅದೇನೆಂದರೆ ಯಡಿಯೂರಪ್ಪ ಬಣ ಮುಖ್ಯಮಂತ್ರಿ ಬದಲಾವಣೆ ಮಂತ್ರವನ್ನು ಕೈಬಿಡದೆ, ಮತ್ತೆ ಅದನ್ನೇ ಪಠಿಸತೊಡಗಿದೆ.
ಈ ನಿಟ್ಟಿನಲ್ಲಿ ದೃಢ ಹೆಜ್ಜೆಹಾಕಿರುವ ಯಡಿಯೂರಪ್ಪ ಬಣ ತಮ್ಮ ಬೇಡಿಕೆ ಈಡೇರದಿದ್ದರೆ ಆರೇಳು ಮಂದಿ ಸಚಿವರೇ ನೇರವಾಗಿ ಮುಖ್ಯಮಂತ್ರಿ ಸದಾನಂದ ಗೌಡರ ಕೈಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಬಿಎಸ್ ವೈ ಮೂಲಗಳು ಹೇಳಿವೆ.
ಈ ಸಂಬಂಧ ಇಂದು ಸೋಮವಾರ ಯಡಿಯೂರಪ್ಪ ಬಣ ಸಭೆ ಸೇರಿ, ನಾಗಪುರದಿಂದ ಮುಖ್ಯಮಂತ್ರಿ ಸದಾನಂದರು ವಾಪಸಾಗುವ ವೇಳೆಗೆ ಅವರ ಕೈಗೆ ರಾಜೀನಾಮ ಪತ್ರ ಹಸ್ತಾಂತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಇದೇ ವೇಳೆ, ಶಾಸಕಾಂಗ ಸಭೆ ಕರೆಯಬೇಕೆಂಬ ತಮ್ಮ ಹಳೆಯ ಬೇಡಿಕೆಗೂ ಮತ್ತೆ ಜೀವ ತುಂಬಲು ಯಡಿಯೂರಪ್ಪ ಬಣ ನಿರ್ಧರಿಸಿದೆ.
ಗಮನಾರ್ಹವೆಂದರೆ, ಪಕ್ಷದ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರ ಸಾರಂಗಿಯ ಮದುವೆಗೆ ರಾಜ್ಯ ಬಿಜೆಪಿ ನಾಯಕರು ಪ್ರತ್ಯೇಕವಾಗಿ 2 ತಂಡಗಳಲ್ಲಿ ಭಾನುವಾರ ನಾಗಪುರಕ್ಕೆ ತೆರಳಿದ್ದಾರೆ. ಹಾಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಎಂದು ಎರಡು ತಂಡಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಈ ನಾಯಕರು ಮದುವೆಗೆ ಹೋಗಿಬಂದಿದ್ದಾರೆ.
ಸದಾನಂದ ಗೌಡರ ಜತೆ ಸಚಿವರಾದ ಬಚ್ಚೇಗೌಡ, ರಾಮದಾಸ್ ಮತ್ತಿತರರಿದ್ದರೆ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಇನ್ನಿತರರು ಪ್ರತ್ಯೇಕವಾಗಿ ಬೇರೊಂದು ವಿಮಾನದಲ್ಲಿ ತೆರಳಿದರು. ಮದುವೆ ಮನೆಯಲ್ಲಿಯೂ ಪ್ರತ್ಯೇಕವಾಗಿ ರಾಷ್ಟ್ರೀಯ ನಾಯಕರೊಂದಿಗೆ ಮಾತನಾಡಿ ಬಂದಿದ್ದಾರೆ. ತನ್ಮೂಲಕ 'ತಾವು ಒಟ್ಟಿಗಿಲ್ಲ' ಎಂಬುದನ್ನು ವರಿಷ್ಠರ ಮುಂದೆಯೂ ಪ್ರದರ್ಶಿಸಿ ಬಂದಿದ್ದಾರೆ.












Click it and Unblock the Notifications