ದೆಹಲಿ ಗೃಹ ಸಚಿವಾಲಯಕ್ಕೆ ಬೆಂಕಿ, ಕಡತಗಳು ಸೇಫ್?

ದೆಹಲಿಯ ಪ್ರತಿಷ್ಠಿತ ಗೃಹ ಸಚಿವಾಲಯದ ಮೊದಲನೇ ಹಾಗೂ ಎರಡನೇ ಮಹಡಿಯ ಕಚೇರಿಗಳಲ್ಲಿ ಬೆಂಕಿ ಆವರಿಸಿದೆ. ಗೃಹ ಸಚಿವ ಪಿ ಚಿದಂಬರಂ ಅವರ ಕಚೇರಿ ಹಾಗೂ ಸಮೀಪದಲ್ಲೇ ಇರುವ ವಿತ್ತ ಸಚಿವಾಲಯಕ್ಕೂ ಬೆಂಕಿ ವ್ಯಾಪಿಸುವ ಸಾಧ್ಯತೆ ಹೆಚ್ಚಾಗಿದೆ.
ಕಾನ್ಫರೆನ್ಸ್ ಕೊಠಡಿ ಸಂಖ್ಯೆ 102ರಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 6 ಅಗ್ನಿ ಶಾಮಕದಳಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಭಾನುವಾರ ರಜೆ ದಿನವಾದ್ದರಿಂದ ಕಚೇರಿಯಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಆದರೆ, ಬೆಂಕಿ ಅನಾಹುತದಿಂದ ಕಚೇರಿಯಲ್ಲಿರುವ ಮಹತ್ವದ ಕಡತಗಳಿಗೆ ಹಾನಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಗೃಹ ಸಚಿವಾಲಯದಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ,
ನಮ್ಮ ತಂಡ ಸ್ಥಳಕ್ಕೆ ಆಗಮಿಸಿದಾಗ 102ನೇ ಸಂಖ್ಯೆಯಲ್ಲಿ ಕೊಠಡಿಯಲ್ಲಿ ಬೆಂಕಿ ವ್ಯಾಪಿಸುತ್ತಿರುವುದು ಕಂಡು ಬಂದಿತು. ಆದರೆ, ಸತತ ಒಂದು ಗಂಟೆ ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಂಡಿದ್ದು, ಪರಿಸ್ಥಿತಿ ಈಗ ಹತೋಟಿಯಲ್ಲಿದೆ ಎಂದು ಅಗ್ನಿಶಾಮಕ ದಳದ ನಿರ್ದೇಶಕ ಎಕೆ ಶರ್ಮ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರದ ಆಡಳಿತ ಕೇಂದ್ರ ಸಚಿವಾಲಯ ಕಟ್ಟಡಕ್ಕೆ ಬೆಂಕಿ ಅನಾಹುತಕ್ಕೆ ಸಿಲುಕಿತ್ತು. ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮಳಿಗೆಗಳಲ್ಲಿ ಮತ್ತೆರಡು ಶವ ಪತ್ತೆಯಾಗಿದ್ದು, ಇದರಿಂದ ಸತ್ತವರ ಸಂಖ್ಯೆ ಐದಕ್ಕೇರಿತ್ತು.
ಮಹಾರಾಷ್ಟ್ರ ಸರ್ಕಾರದ ಎಲ್ಲಾ ಸಚಿವರುಗಳು ಕಚೇರಿ ಈ ಕಟ್ಟಡದಲ್ಲಿದ್ದು, ದಾಖಲೆ ಪತ್ರಗಳು ಬಹುತೇಕ ಸುಟ್ಟು ಹೋಗಿರುವ ಸಾಧ್ಯತೆಗಳಿವೆ. ಆದರ್ಶ ಹಗರಣದ ಅಷ್ಟೂ ದಾಖಲೆಗಳು ಸುರಕ್ಷಿತವಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಬೆಂಕಿ ಅನಾಹುತದಲ್ಲಿ ಆದರ್ಶ ಹಗರಣದ ಕಡತಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು.
ಮುಖ್ಯಮಂತ್ರಿಯ ಪಿಆರ್ ಒ ಸತೀಶ್ ಲಲಿತ್, ಉಪಮುಖ್ಯಮಂತ್ರಿ ಕಚೇರಿಯಲ್ಲಿ ಪಿಆರ್ ಒ ಆಗಿರುವ ವಿಶಾಲ್ ಧಗೆ ಮತ್ತು ಸಂಜಯ್ ದೇಶ್ ಮುಖ್, ಗೃಹ ಸಚಿವರ ಪಿಆರ್ ಒ ಕಿಶೋರ್ ಗಂರ್ಗುಡೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರು ದಟ್ಟ ಹೊಗೆಯಿಂದಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.












Click it and Unblock the Notifications