ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಹೆಜ್ಜೆ ಮುಂದಿಟ್ಟ ಬಿಎಸ್‌ವೈಗೆ ಎರಡು ಹೆಜ್ಜೆ ಹಿನ್ನಡೆ

By Prasad
|
Google Oneindia Kannada News

One step ahead two behind for Yeddyurappa
ಬೆಂಗಳೂರು, ಜೂ. 18 : ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹಿನ್ನಡೆಯುಂಟಾಗಿದ್ದರೆ, ಮುಖ್ಯಮಂತ್ರಿ ಬದಲಾವಣೆಯ ಹಳೆಯ ಬೇಡಿಕೆಯನ್ನು ಹಿಡಿದುಕೊಂಡು ಯಡಿಯೂರಪ್ಪ ಮತ್ತು ಬೆಂಬಲಿಗರು ಮತ್ತೊಂದು ಅಡಿಯನ್ನು ಮುಂದಿಟ್ಟಿದ್ದಾರೆ.

ನಾಗದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ವಿ ಸೋಮಣ್ಣ ಅವರು ಜೂ.20ರಂದು ಲೋಕಾಯುಕ್ತ ಕೋರ್ಟ್ ಮುಂದೆ ಹಾಜರಾಗಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇದು ಯಡಿಯೂರಪ್ಪನವರಿಗೆ ಆದ ಮೊದಲ ಹಿನ್ನಡೆ. ಎರಡನೇ ಹಿನ್ನಡೆಯಾಗಿದ್ದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ. ಒಂದು ಹೆಜ್ಜೆ ಮುಂದಿಟ್ಟಿರುವ ಯಡಿಯೂರಪ್ಪನವರು ಎರಡು ಹೆಜ್ಜೆ ಹಿಂದೆ ಇಟ್ಟಂತಾಗಿದೆ.

ಅಕ್ರಮ ಗಣಿಗಾರಿಕೆ ಕಿಕ್ ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ, ಅವರ ಇಬ್ಬರು ಮಕ್ಕಳಾದ ರಾಘವೇಂದ್ರ, ವಿಜಯೇಂದ್ರ ಮತ್ತು ಅಳಿಯ ಸೋಹನ್ ಕುಮಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯಲ್ಲಿ, ಸಿಬಿಐ ವಕೀಲರು ಸ್ಫೋಟಕ ಮಾಹಿತಿಗಳನ್ನು ಹೈಕೋರ್ಟಿಗೆ ನೀಡಿದ್ದು, ಎಲ್ಲರ ಜಾಮೀನು ಅರ್ಜಿ ತಿರಸ್ಕರಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ತನಿಖೆಯ ಸಮಯದಲ್ಲಿ ಯಡಿಯೂರಪ್ಪನವರ ಮಕ್ಕಳಾದ ಸಂಸದ ರಾಘವೇಂದ್ರ, ವಿಜಯೇಂದ್ರ ಮತ್ತು ಅಳಿಯ ಸೋಹನ್ ಕುಮಾರ್ ಸರಿಯಾಗಿ ಸಹಕರಿಸುತ್ತಿಲ್ಲ. ಅಲ್ಲದೆ, ಕೇಳಲಾದ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದ್ದಾರೆ. ಹೀಗಾಗಿ ತನಿಖೆ ಸುಸೂತ್ರವಾಗಿ ನಡೆಯಬೇಕಾದರೆ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ, ಅವರನ್ನು ತಮ್ಮ ವಶಕ್ಕೆ ಕೊಡಬೇಕು ಎಂದು ಸಿಬಿಐ ವಕೀಲ ಅಶೋಕ್ ಭಾನ್ ವಾದ ಮಾಡಿದ್ದಾರೆ. ಅರ್ಜಿಯ ತೀರ್ಮಾನ ಮಂಗಳವಾರ ಆಗಲಿದೆ.

ಸಿಬಿಐ ನೀಡಿರುವ ಸ್ಫೋಟಕ ಸುದ್ದಿಯೇನೆಂದರೆ, ಅಕ್ರಮ ಗಣಿ ಗುತ್ತಿಗೆಗಾಗಿ ಲಂಚ ಸ್ವೀಕರಿಸಿದ ಯಡಿಯೂರಪ್ಪ ಮತ್ತು ಅವರ ಮಕ್ಕಳ ಒಡೆತನದ ಕಂಪನಿ ಮತ್ತು ಲಂಚ ನೀಡಿದೆ ಎಂದು ಆರೋಪಿಸಲಾಗಿರುವ ಜಿಂದಾಲ್ ಕಂಪನಿ ನಡುವೆ ಅಕ್ರಮ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ನೇರವಾದ ಡೀಲ್ ನಡೆದಿದೆ. ಈ ಡೀಲ್‌ನ ಸೂತ್ರಧಾರಿ ಯಡಿಯೂರಪ್ಪ ಅವರ ಮಗಳು ಉಮಾದೇವಿ ಎಂದು ಸಿಬಿಐ ಹೈಕೋರ್ಟಿಗೆ ಹೇಳಿದೆ.

2010ರಲ್ಲಿ ಗಣಿಗಾರಿಕೆ ರಫ್ತನ್ನು ನಿಷೇಧಿಸಿ ಆದೇಶ ರಾಜ್ಯ ಸರಕಾರ ಹೊರಡಿಸಿತು. ಅದೇ ದಿನವೇ, ಜಿಂದಾಲ್ ಕಂಪನಿಯ ಜೊತೆ ಯಡಿಯೂರಪ್ಪ ಅವರ ಮಗಳು ಉಮಾದೇವಿ ಮಾತುಕತೆ ನಡೆಸಿದ್ದಾರೆ. ಇದರ ಫಲವಾಗಿ ಅಕ್ರಮ ಗಣಿಗಾರಿಕೆ ನಡೆಸಲು ಜಿಂದಾಲ್ ಕಂಪನಿಗೆ ಅನುಮತಿ ನೀಡಬೇಕಾಯಿತು. ರಫ್ತನ್ನು ನಿಷೇಧಿಸಿದ್ದರಿಂದ ಜಿಂದಾಲ್ ಕಂಪನಿಗೆ ಭಾರೀ ಲಾಭ ಬಂದಿತು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 789 ಕೋಟಿ ರು.ನಷ್ಟು ನಷ್ಟ ಸಂಭವಿಸಿತು ಎಂದು ಸಿಬಿಐ ಹೈಕೋರ್ಟಿಗೆ ತಿಳಿಸಿದೆ.

ನಾಯಕತ್ವ ಬದಲಾವಣೆಗೆ ಪಟ್ಟು : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ವಶಕ್ಕೊಳಗಾಗುವ ಭೀತಿಯಲ್ಲಿರುವ ಯಡಿಯೂರಪ್ಪನವರು, ಮುಖ್ಯಮಂತ್ರಿ ಬದಲಾವಣೆಯ ಯತ್ನವನ್ನು ಮತ್ತೆ ಮುಂದುವರಿಸಿದ್ದಾರೆ. ಸೋಮವಾರ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಭೇಟಿ ಮಾಡಿರುವ ಯಡಿಯೂರಪ್ಪ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ಕಿತ್ತೊಗೆಯಲು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ತಮ್ಮ ಬೆಂಬಲವಿಲ್ಲದೆ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಗಳಿಸುವುದು ಅಸಾಧ್ಯ ಎಂದಿದ್ದ ಯಡಿಯೂರಪ್ಪ, ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ನಾಯಕತ್ವ ಬದಲಾವಣೆಯ ಹಳೆಚಾಳಿಯನ್ನು ಶುರು ಮಾಡಿದ್ದಾರೆ.

ಸದಾನಂದ ಗೌಡರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಮಾಜಿ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರನ್ನು ತರಬೇಕು ಎಂಬ ಬೇಡಿಕೆ ಮತ್ತೆ ಮುಂದಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ನಿಯೋಗ ಭೇಟಿ ಮಾಡಿ ಬೇಡಿಕೆ ಮುಂದಿಡಲಿದೆ. ಇಂದಿನ ಸಭೆಯಲ್ಲಿ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಸಿಎಂ ಉದಾಸಿ, ಸಂಸದ ಅಂಗಡಿ, ಬೇಳೂರು ಗೋಪಾಲಕೃಷ್ಣ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಮುಂತಾದವರು ಭಾಗವಹಿಸಿದ್ದರು. ಯುದ್ಧ ಮತ್ತೆ ಆರಂಭವಾಗಿದೆ.

English summary
Though BS Yeddyurappa had to put two steps behind with respect to illegal mining and denotification cases in Karnataka high court, BSY has put one step ahead by demanding removal of DV Sadananda Gowda and make Jagadish Shettar as Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X