ಚುನಾವಣೆಗೆ ಸಿದ್ಧರಾಗಿ: ಸದಾ ಬಾಯಲ್ಲಿ ಬಿಎಸ್ ವೈ ಹೇಳಿಕೆ
ಇನ್ನು ಆರು ತಿಂಗಳೊಳಗೆ ಅಸೆಂಬ್ಲಿ ಚುನಾವಣೆ ಎದುರಿಸಲು ಸಿದ್ಧರಾಗಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕರೆ ನೀಡಿದ ಬಳಿಕ ಸದಾನಂದ ಗೌಡರು ಅವಧಿಗೂ ಮುನ್ನ ಚುನಾವಣೆಯ ಮುನ್ಸೂಚನೆ ನೀಡಿದ್ದಾರೆ.
ಸದಾ ಮೇಲೆ ಒತ್ತಡ : ಸಿಎಂ ಸದಾನಂದ ಗೌಡರು ಈ ರೀತಿ ಹೇಳಿಕೆ ನೀಡಲು ಕಾರಣವಾದರೂ ಏನು? ಅವರ ಮೇಲಿರುವ ಒತ್ತಡವಾದರೂ ಯಾವುದು? ಎಂಬ ಪ್ರಶ್ನೆಗೆ ಸಂಪುಟ ವಿಸ್ತರಣೆ ಎಂಬ ಉತ್ತರ ಸಿಗುತ್ತದೆ.
ಉಳಿದ ಅಧಿಕಾರ ಅವಧಿಯಲ್ಲಿ ಸಂಪುಟ ವಿಸ್ತರಣೆ ಮಾಡಿ ಹೊಸಬರಿಗೆ ಅವಕಾಶ ನೀಡುವುದು. ಕೆಲ ಹಿರಿಯರಿಗೆ ಕೊಕ್ ನೀಡುವುದು ಸದಾ ಅವರ ಯೋಜನೆ. ಈ ಯೋಜನೆಗೆ ಹೈ ಕಮಾಂಡ್ ಒಪ್ಪಿಗೆ ನೀಡಿದ್ದರೂ ಸಂಪುಟ ವಿಸ್ತರಣೆ ದಿನಾಂಕ ನಿಗದಿಪಡಿಸದಂತೆ ತಡೆ ಹಿಡಿದಿದೆ.
ಹೀಗಾಗಿ ಸದಾನಂದ ಅವರ ಮೇಲೆ ಶಾಸಕರು, ಸಚಿವರು ಅಸಮಾಧಾನಗೊಂಡಿದ್ದಾರೆ. ಕೊಡಗಿನ ಅಪ್ಪಚ್ಚು ರಂಜನ್ ಸೇರಿದಂತೆ ಕೆಲವರು ಸದಾನಂದ ಗೌಡರಿಗೂ ಮುನ್ನ ದೆಹಲಿ ತಲುಪಿ ಹೈ ಕಮಾಂಡ್ ಮುಂದೆ ದುಃಖ ತೋಡಿಕೊಳ್ಳುವುದಾಗಿ ಖಾಸಗಿ ವಾಹಿನಿಗಳಲ್ಲಿ ಹೇಳಿದ್ದಾರೆ.
ಯಡಿಯೂರಪ್ಪ ಬೆಂಬಲಿತ ಸಚಿವರು ಸಂಪುಟ ವಿಸ್ತರಣೆ ಮುಂದೂಡಲ್ಪಟ್ಟರೆ ನಾವು ಸೇಫ್ ಎಂಬ ಖುಷಿಯಲ್ಲಿದ್ದಾರೆ. ಈ ಎಲ್ಲಾ ಒತ್ತಡಗಳಿಗೆ ಮಧ್ಯಂತರ ಚುನಾವಣೆಯೇ ಪರಿಹಾರ ಎಂದು ಹಲವರ ಅಭಿಪ್ರಾಯವನ್ನು ಸದಾನಂದ ಗೌಡರು ಹೇಳಿದ್ದಾರೆ.
ಕರ್ನಾಟಕದಲ್ಲಿ ಅವಧಿಗೂ ಮುನ್ನ ಇತರ ರಾಜ್ಯಗಳಲ್ಲಿ ನಡೆಯುವ ಚುನಾವಣೆಯ ಸಂದರ್ಭದಲ್ಲಿ ಚುನಾವಣೆ ನಡೆಸಬೇಕೋ ಬೇಡವೋ ಎಂಬ ನಿರ್ಧಾರ ಆಯೋಗ ಕೈಗೊಳ್ಳಲಿದೆ. ಆಯೋಗದ ನಿರ್ಧಾರಕ್ಕೆ ತಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ. ಆಯೋಗದ ನಿರ್ಧಾರಕ್ಕೆ ತಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸದಾನಂದ ಹೇಳಿದರು.
ಸಂಪುಟ ವಿಸ್ತರಣೆ ವಿಘ್ನ: ಸಂಪುಟ ವಿಸ್ತರಣೆಗೆ ಅನೇಕ ಬಾರಿ ವಿಘ್ನಗಳು ಎದುರಾಗುತ್ತಲೇ ಇದೆ. ಈಗ ರಾಷ್ಟ್ರಪತಿ ಚುವನಾವಣೆಗೆ ಸಿದ್ಧತೆ ನಡೆಯುತ್ತಿರುವುದರಿಂದ ಬಿಜೆಪಿ ಹೈಕಮಾಂಡ್ ನಿಂದ ಸಂಪುಟ ವಿಸ್ತರಣೆ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದರು.
ಆದರೂ, ಎರಡು ದಿನದೊಳಗೆ ದಿಲ್ಲಿಗೆ ತೆರಳಿ ಜೊತೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸಂಪುಟ ವಿಸ್ತರಣೆಗೆ ತಮಗೆ ಎಲ್ಲ ಕಾಲವೂ ಆಷಾಢವಿದ್ದಂತೆ. ಹೀಗಾಗಿ ಆಷಾಢ ಶುಭಾಶುಭಗಳ ಸಮಸ್ಯೆಯಿಲ್ಲ ಎಂದರ.
ಮುಂದಿನ ಮೂರು ನಾಲ್ಕು ದಿನಗಳೊಳಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಕರಾವಳಿ, ಕೊಡಗು ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಇನ್ನೂ ಸ್ವಲ್ಪ ದಿನ ಕಾದು ನೋಡಿದ ಬಳಿಕ ಮೋಡ ಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.
ಶ್ರೀರಾಮುಲು ಹೊಸ ಪಕ್ಷ ಕಟ್ಟುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶ್ರೀರಾಮುಲು ಈಗಲೂ ಬಿಜೆಪಿಯೊಂದಿಗೇ ಇದ್ದಾರೆ. ಕೆಲವೊಂದು ಭಿನ್ನಾಭಿಪ್ರಾಯ, ಗೊಂದಲದಿಂದ ದೂರವಾಗಿದ್ದರು. ಅವರನ್ನು ಕೊನೆಯವರೆಗೂ ನಮ್ಮ ಪಕ್ಷದೊಂದಿಗೆ ಇರುವಂತೆ ಮನವೊಲಿಸಲಾಗುವುದು ಎಂದರು.