ಆಶ್ವಾಸನೆಗಳ ಮಹಾಪೂರ ಹರಿಸಿದ ಶ್ರೀರಾಮುಲು
ಸಮಾನತೆ ಸಮಬಾಳು ಸಮಗ್ರ ಕರ್ನಾಟಕದ ಅಭಿವೃದ್ಧಿ ಎಂದ ಬಳ್ಳಾರಿ ಶಾಸಕ ಬಿ ಶ್ರೀರಾಮುಲು ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸೇರಿಸಿ ಆಶ್ವಾಸನೆಗಳ ಮಹಾಪೂರವನ್ನು ಹರಿಸಿದರು.
ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ, ವಿದ್ಯಾವಂತ ನಿರುದ್ಯೋಗಿಗಳಿಗೆ 2 ಸಾವಿರ ರು ಮಾಸಾಶಾನ, ಬಡವರ ಮಕ್ಕಳು ಓದುವವರೆಗೂ ಉಚಿತ ಶಿಕ್ಷಣ, ಸರ್ಕಾರಿ ಜಮೀನನಲ್ಲಿ ಬೇಸಾಯ ಮಾಡುವವರಿಗೆ ಅದರ ಪಹಣಿ, ಬೀಜ ಬಿತ್ತನೆ ಕಾಲದಲ್ಲೇ ಫಸಲಿನ ಘೋಷಣೆ..ಇತ್ಯಾದಿ ಅಂಶಗಳು ಬಿಎಸ್ ಆರ್ ಕಾಂಗ್ರೆ ಪಕ್ಷದ ಪ್ರಣಾಳಿಕೆ ಪಟ್ಟಿಯಲ್ಲಿದೆ.
ಸೋಮಶೇಖರ್ ರೆಡ್ಡಿ ಕಣ್ಣೀರು: ಪೊಲೀಸ್ ಪೇದೆ ಮಕ್ಕಳಾದ ನಾವು ಬೆಳೆದು ಬಂದ ರೀತಿ ಕಂಡು ಹಲವರಿಗೆ ಹೊಟ್ಟೆ ಕಿಚ್ಚು ಬಂದಿದೆ. ರಾಜಕೀಯವಾಗಿ, ಆರ್ಥಿಕವಾಗಿ ನಮ್ಮ ಬೆಳವಣಿಗೆ ಸಹಿಸದವರು ನಮ್ಮ ಗಾಲಿ ರೆಡ್ಡಿಯನ್ನು ಜೈಲಿಗೆ ತಳ್ಳಿದ್ದಾರೆ. ಜಾಮೀನಿಗಾಗಿ ಲಂಚ ನೀಡಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರು ಕಣ್ಣೀರಟ್ಟರು.
ಧರ್ಮಗುರು ಮುಹಮ್ಮದ್ ಅಬುತಾಲೀಬ್ ರೆಹ್ಮಾನಿ: ಕೇಂದ್ರ ಹಾಗೂ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್-ಬಿಜೆಪಿ ಪಕ್ಷಗಳಿಂದ ಜನತೆಯ ಅಭಿವೃದ್ಧಿ ಸಾಧ್ಯವಿಲ್ಲ. ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ. ಕಾಂಗ್ರೆಸ್ ಅವರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದೆ.
'ಮೈಸೂರಿನ ಹುಲಿ' ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು. ಇಲ್ಲಿನ ಜನತೆ ಒಮ್ಮೆ ಮಾತುಕೊಟ್ಟರೆ ಯಾವುದೇ ಕಾರಣಕ್ಕೂ ಮಾತು ತಪ್ಪುವುದಿಲ್ಲ. ರಾಜ್ಯದ ಎಲ್ಲ ವರ್ಗದ ಜನತೆಯೆ ಕಷ್ಟ-ಕಾರ್ಪಣ್ಯಗಳನ್ನು ಅರಿತ ಸ್ವಾಭಿಮಾನಿ ಶ್ರೀರಾಮುಲು ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ವಿದ್ಯಾಧರ ಗುರೂಜಿ : ದೇಶದ ಜನತೆಗೆ ನಿಜವಾದ ಸ್ವಾತಂತ್ರ ದೊರೆತಿಲ್ಲ. ರಾಜಕೀಯದಲ್ಲಿ ಭ್ರಷ್ಟರು ತುಂಬಿದ್ದು, ಕೀಳು ಮಟ್ಟದ ಸಂಸ್ಕೃತಿ ನಿರ್ಮಾಣಕ್ಕೆ ನಾಂದಿಯಾಗಿದೆ. ಆದುದರಿಂದ ಇದರಲ್ಲಿನ ಹೊಸ ಬದಲಾವಣೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಮುನ್ನಡಿಯಾಗಲಿ.
ಕುಲಗೆಟ್ಟಿರುವ ರಾಜಕೀಯ-ಸಾಮಾಜಿಕ ವ್ಯವಸ್ಥೆಯನ್ನು ಕಂಡು ಯುವಕರ ರಕ್ತವೇಕೇ ಕುದಿಯುತ್ತಿಲ್ಲ ಎಂದು ಕುರ್ಚಿಯಿಂದ ಎದ್ದು ನಿಂತ ವಿದ್ಯಾಧರ ಗುರೂಜಿ ಅವರ ಆರ್ಭಟದ ನುಡಿಗಳಿಗೆ ಕೆಲಕಾಲ ಜನತೆ ಬೆಚ್ಚಿಬಿದ್ದಿತು.
ಶ್ರೀರಾಮುಲು : ಪಕ್ಷದ ಕೆಲ ಮಟ್ಟ ಸದಸ್ಯರಿಂದ ಹಿಡಿದು ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರ ಹೆಸರುಗಳನ್ನು ಓದುವಷ್ಟರಲ್ಲಿ ಶ್ರೀರಾಮುಲುಗೆ ಸಾಕುಸಾಕಾಯಿತು. ಇದು 921 ಕಿ.ಮೀ ಪಾದಯಾತ್ರೆಯಾಗಿರಲಿಲ್ಲ 1200 ಕಿ.ಮೀ ಕ್ರಮಿಸಿದೆವು. ಸ್ವಾಭಿಮಾನಿ ನಡಿಗೆಯಲ್ಲ, ಜನರ ಪ್ರೀತಿ ವಿಶ್ವಾಸ ಗಳಿಸಿದ ನಡಿಗೆ ಎಂದು ಶ್ರೀರಾಮುಲು ಪಾದಯಾತ್ರೆ ಕತೆ ಹೇಳತೊಡಗಿದರು.
ಬಿಜೆಪಿಗಾಗಿ ನಾವು ಅಳಿಲು ಸೇವೆ ಸಲ್ಲಿಸಿದ್ದೇವೆ, ಶ್ರೀರಾಮಚಂದ್ರನಿಗೆ ಆಂಜನೇಯ ನೀಡಿದ ಬೆಂಬಲ ನಮ್ಮಿಂದ ಬಿಜೆಪಿ ಬಯಸಿತ್ತು. ಆದರೆ, ಉಪಕಾರ ಪಡೆದು ಅಪಮಾನ ಮಾಡಿದ ಬಿಜೆಪಿ ಸರ್ಕಾರ ಇನ್ನು ಮುಂದೆ ಅಧಿಕಾರಕ್ಕೆ ಬರುವುದಿಲ್ಲ. ಬಿಜ್ಜಳನ ಸಂಸ್ಥಾನದಲ್ಲಿ ಬಸವಣ್ಣ ಅವರಿಗೆ ಆದ ಅಪಮಾನದಂತೆ ನಮಗೂ ಆಗಿದೆ.
ಸಮಗ್ರ ಕರ್ನಾಟಕ ಅಭಿವೃದ್ಧಿ ನಮ್ಮ ಪಕ್ಷದ ಗುರಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಬಯಲು ಸೀಮೆಯಲ್ಲಿ ಮಾತ್ರ ಪಾದಯಾತ್ರೆ ಮಾಡಿದ ಮಾತ್ರಕ್ಕೆ ಮಿಕ್ಕ ಜಿಲ್ಲೆಗಳನ್ನು ನಿರ್ಲಕ್ಷಿಸುತ್ತಿಲ್ಲ. ಮಲೆನಾಡು, ಕರಾವಳಿ, ಮೈಸೂರು ಭಾಗಗಳಲ್ಲಿ ಮತ್ತೊಮ್ಮೆ ಪಾದಯಾತ್ರೆ ಕೈಗೊಳ್ಳುವೆ. 224 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. 10 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ ಎಂದು ಶ್ರೀರಾಮುಲು ಹೇಳಿದರು.