ರಾಷ್ಟ್ರಪತಿ ಸ್ಥಾನಕ್ಕೆ ಅಬ್ದುಲ್ ಕಲಾಂ ಸ್ಪರ್ಧೆ ಇಲ್ಲ
ಎರಡನೇ ಬಾರಿ ಸ್ಪರ್ಧಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ, ಚುನಾವಣೆ ಸ್ಪರ್ಧಿಸುವ ಬಗ್ಗೆ ನಾನು ಯೋಚಿಸಿಲ್ಲ ಎಂದು ಅಬ್ದುಲ್ ಕಲಾಂ ಹೇಳಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಕಲಾಂ ಅವರು ಸ್ಪರ್ಧಿಸಬೇಕೆಂದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿದ ಮನವಿಗೆ ಕಲಾಂ ಈ ರೀತಿ ಉತ್ತರಿಸಿದ್ದಾರೆ.
ಸೋಮವಾರ ಬೆಳಗ್ಗಿನಿಂದ ಕಲಾಂ ಅವರ ಮನ ಓಲೈಕೆ ಕಾರ್ಯ ನಡೆದಿತ್ತು. ಆದರೆ ಅವರು ತಮ್ಮ ನಿರ್ಧಾರವನ್ನು ಮಧ್ಯಾಹ್ನದ ವೇಳೆ ಪ್ರಕಟಿಸಿದರು. ಅಭ್ಯರ್ಥಿಯಾಗಿ ಅಯ್ಕೆ ಮಾಡಿದ್ದಕ್ಕೆ ನಾನು ಎರಡು ಪಕ್ಷಗಳಿಗೆ ಅಭಾರಿಯಾಗಿದ್ದೇನೆ. ಪ್ರಚಲಿತ ರಾಜಕೀಯ ಪರಿಸ್ಥಿತಿಯ ಅರಿವಿದೆ. ಮಮತಾ ಬ್ಯಾನರ್ಜಿ ಅವರಿಗೆ ನಾನು ಋಣಿಯಾಗಿದ್ದೇನೆ ಎಂದು ಕಲಾಂ ಹೇಳಿದ್ದಾರ.
ಪ್ರಣಬ್ ಮುಖರ್ಜಿ ಆಯ್ಕೆ ಖಚಿತ: ಯುಪಿಎ ತನ್ನ ಅಭ್ಯರ್ಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ನಿಲ್ಲಿಸಿದ್ದು, ಆಯ್ಕೆ ಖಚಿತವಾಗಿದೆ. ಪಿಎ ಸಂಗ್ಮಾ ಕೂಡಾ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಬಿಜೆಡಿ ಹಾಗೂ ಎಐಎಡಿಎಂಕೆ ಮಾತ್ರ ಸಂಗ್ಮಾ ಪರ ಬ್ಯಾಟಿಂಗ್ ಮಾಡುತ್ತಿತ್ತು. ಆದರೆ, ಸಂಗ್ಮಾ ಇದ್ದಕ್ಕಿದ್ದಂತೆ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿರುವುದಾಗಿ ಪ್ರಕಟಿಸಿದ್ದಾರೆ.
ಪ್ರಣಬ್ ಆಯ್ಕೆಯನ್ನು ತಿರಸ್ಕರಿಸಿದ ಮಮತಾ ಬ್ಯಾನರ್ಜಿ ಹಾಗೂ ಎನ್ ಡಿಎ ಮಿತ್ರ ಪಕ್ಷಗಳು ಕಲಾಂ ಅವರಿಗೆ ಬೆಂಬಲ ಸೂಚಿಸಿತ್ತು. ಆದರೆ ಕಲಾಂ ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಈಗ ಪ್ರಣಬ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಪ್ರಣಬ್ ಮುಖರ್ಜಿ ಅವರಿಗೆ ಬೆಂಬಲ ನೀಡುವ ಬಗ್ಗೆ ಸಮಾಜವಾದಿ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷ ಕಠಿಣ ನಿಲುವು ತೆಗೆದು ಕೊಂಡಿರುವುದು ಮುಂದೆ ಹಲವು ರಾಜಕೀಯ ಬದಲಾವಣೆಗೆ ಕಾರಣವಾಗುವ ಸಾಧ್ಯತೆಯಿದೆ.
ಈ ನಡುವೆ ಎನ್ ಡಿಎ ಮಿತ್ರಪಕ್ಷಗಳು ಸಭೆ ಸೇರಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಬೆಂಬಲ ನೀಡುವ ಬಗ್ಗೆ ಹಲವಾರು ಬಾರಿ ಚರ್ಚೆ ನಡೆಸಿದರೂ ಒಮ್ಮತಕ್ಕೆ ಬರಲು ಆಗಲಿಲ್ಲ. ಜನತಾ ದಳ (ಯು) ಶರದ್ ಯಾದವ್ ಸೇರಿದಂತೆ ಕೆಲ ಪ್ರಮುಖ ನಾಯಕರು ಕಲಾಂ ಅವರನ್ನು ಬೆಂಬಲಸಲು ನಿರಾಕರಿಸಿದ್ದರು.
ತೃಣಮೂಲ ಕಾಂಗ್ರೆಸ್ ಹೊರತು ಪಡಿಸಿ, ಎನ್ ಡಿಎ ಮಿತ್ರಪಕ್ಷಗಳು ಅನಿವಾರ್ಯವಾಗಿ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ.
ದೇಶದ ಜನತೆ ಇನ್ನೂ ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ನಾನು ಚಿರಋಣಿ. ನನ್ನ ಮೇಲೆ ನಂಬಿಕೆ ಇಟ್ಟಿರುವ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದು ಕಲಾಂ ಹೇಳಿದ್ದಾರೆ