ಜಯನಗರ: ಮಾಜಿ ಸಂಸದ ರಾಮುಲು ಪುತ್ರಿ ಕಿಡ್ನಾಪ್
ಅಪಹೃತ ಮಹಿಳೆಯನ್ನು ಮಾಜಿ ಕಾಂಗ್ರೆಸ್ ಸಂಸದ ಎಚ್ ಜಿ ರಾಮುಲು ಅವರ ಪುತ್ರಿ ವಿಷ್ಣು ನಂದನಾ ಎಂದು ಗುರುತಿಸಲಾಗಿದೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಬಸ್ ನಿಲ್ದಾಣದಲ್ಲಿ ವಿಷ್ಣು ನಂದನಾ ನಿಂತಿದ್ದರು.
8.30ರ ಸುಮಾರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಷ್ಣು ನಂದನಾ ಅವರನ್ನು ಹೊತ್ತೊಯ್ದಿದ್ದಾರೆ ಎಂದು ವಿಷ್ಣುನಂದನಾ ಅವರ ಕಸಿನ್ ಡಾಲಿ ಅವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಹೇಳಲಾಗಿದೆ.
ಅಪಹರಣಕಾರರು ವಿಷ್ಣುನಂದನಾ ಬಿಡುಗಡೆಗಾಗಿ 40ಲಕ್ಷ ರೂ ಒತ್ತೆಹಣ ಕೇಳಿದ್ದಾರೆ ಎಂದು 47 ವರ್ಷದ ವಿಷ್ಣುನಂದನಾ ಅವರು ಪತಿ ರವಿಕುಮಾರ್ ಗೆ ಕರೆ ಮಾಡಿ ಹೇಳಿದ್ದಾರೆ. ನಂತರ ಫೋನ್ ಕಾಲ್ ಕಟ್ ಆಗಿದೆ.
'ನಮಗೂ ನಿಜಕ್ಕೂ ಆಶ್ಚರ್ಯವಾಗಿದೆ. ನಮಗೆ ಯಾರು ಶತ್ರುಗಳಿಲ್ಲ. ವಿಷ್ಣು ನಂದನಾ ಜೊತೆ ಅವರ ಕಸಿನ್ ಒಬ್ಬರು ಇದ್ದರು. ಈ ಬಗ್ಗೆ ನನಗೆ ಮಾಧ್ಯಮಗಳ ಮೂಲಕ ತಿಳಿಯಿತು. ನಾನು ಸದ್ಯಕ್ಕೆ ಗಂಗಾವತಿಯಲ್ಲಿದ್ದೇನೆ. ಕುಟುಂಬ ವರ್ಗದೊಡನೆ ಸಂಪರ್ಕದಲ್ಲಿದ್ದೇನೆ' ಎಂದು ವಿಷ್ಣುನಂದನಾ ಅವರ ಸೋದರ ಶ್ರೀನಾಥ್ ಹೇಳಿದ್ದಾರೆ.
'ಯಾರೋ ಗೊತ್ತಿರುವವರೇ ಮಾಡಿರುವ ಸಾಧ್ಯತೆಯಿದೆ. ಆದರೆ, ಯಾವ ಕಾರಣಕ್ಕಾಗಿ ಅಪಹರಣ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ' ಎಂದು ಮಾಜಿ ಸಂಸದ ಎಚ್ ಜಿ ರಾಮುಲು ಪ್ರತಿಕ್ರಿಯಿಸಿದ್ದಾರೆ.
ಡಾಲಿ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು, ಫೋನ್ ಕರೆಯನ್ನು ಟ್ರೇಸ್ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಘಟನೆ ವಿವರ: ಹೈದರಾಬಾದಿನ ನಿವಾಸಿಯಾಗಿರುವ ನಂದನಾ ಅವರು ತಿರುಪತಿಗೆ ತೆರಳಿದ್ದವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಿಂದ ಹೈದರಾಬಾದಿಗೆ ತೆರಳುವ ಮುನ್ನ ಸ್ವಲ್ಪ ಶಾಪಿಂಗ್ ಮಾಡಲು ಜಯನಗರ ವಾಣಿಜ್ಯ ಸಂಕೀರ್ಣಕ್ಕೆ ಭೇಟಿ ಕೊಟ್ಟಿದ್ದಾರೆ.
ರಾಮುಲು ಅವರ ಸೋದರನ ಮಗಳು ಡಾಲಿ ಜೊತೆ ಶಾಪಿಂಗ್ ಗೆ ಹೋಗಿದ್ದಾರೆ. ವಿಷ್ಣುನಂದನಾ ಅವರ ಚಲನವಲನಗಳ ಬಗ್ಗೆ ಗೊತ್ತಿರುವವರು ಈ ಕೃತ್ಯ ಎಸೆಗಿರುವ ಶಂಕೆ ವ್ಯಕ್ತವಾಗಿದೆ. ಅಪಹರಣಕಾರರಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆ ಇದ್ದರು ಎನ್ನಲಾಗಿದೆ. ಬಹುಶಃ ದಂಪತಿಗಳು ಈ ಕಿಡ್ನಾಪ್ ಮಾಡಿರುವ ಸಾಧ್ಯತೆಯಿದೆ.
ವಿಷ್ಣುನಂದನಾ ಅವರ ಬಳಿ ಬಂದು ಉತ್ತರ ಕರ್ನಾಟಕ ಶೈಲಿಯಲಿ 'ನೀವು ವಿಷ್ಣುನಂದನಾ, ರಾಮುಲು ಅವರ ಪುತ್ರಿ ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ. ವಿಷ್ಣುನಂದನಾ ಅವರು 'ಹೌದು' ಎನ್ನುತ್ತಿದ್ದಂತೆ ಅವರನ್ನು ಎಳೆದು ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಲಾಗಿದೆ. ಕೆಲ ಹೊತ್ತಿನ ನಂತರ ವಿಷ್ಣುನಂದನಾ ಅವರ ಪತಿಗೆ ಕರೆ ಮಾಡಿ ಒತ್ತೆಹಣ ನೀಡುವಂತೆ ಆಗ್ರಹಿಸಲಾಗಿದೆ.
ಯಾರಿದು ಎಚ್ ಜಿ ರಾಮುಲು? : ಎಚ್ ಜಿ ರಾಮುಲು ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ 1980, 1985, 1998 ರಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. [ವಿವರಗಳಿಗೆ ನೋಡಿ]
1991 ಹಾಗೂ 1996ರಲ್ಲಿ ರಾಮುಲು ಅವರಿಗೆ ಟಿಕೆಟ್ ನೀಡಲು ಕೆಪಿಸಿಸಿ ನಿರಾಕರಿಸಿತ್ತು. ನನಗೆ ಚುನಾವನೆ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ರಾಮುಲು ಅವರು ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ತಿಳಿಸಿದ್ದರು.
ನಂತರ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯ ಬಂದಾಗ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕೆ ವಿರುಪಾಕ್ಷಪ್ಪ ಅವರ ಹೆಸರನ್ನು ರಾಮುಲು ಅವರು ಸೂಚಿಸಿದ್ದರು. ರಾಮುಲು ಅವರ ಪುತ್ರ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್ ಆರ್ ಶ್ರೀನಾಥ್ ಅವರು ಕೂಡಾ ವಿರುಪಾಕ್ಷಪ್ಪ ಅವರ ಹೆಸರು ಸೂಚಿಸಿದ್ದರು.