ಶೀಘ್ರವೇ ಯಡಿಯೂರಪ್ಪ ಸಿಎಂ:'ಜ್ಯೋತಿಷಿ' ಸೋಮಣ್ಣ

ಇತ್ತೀಚೆಗೆ ಮಲ್ಲೇಶ್ವರಂನಲ್ಲಿ ಯಡಿಯೂರಪ್ಪನವರು ತೆರೆದಿರುವ ಜನಸಂಪರ್ಕ ಕಚೇರಿಯಲ್ಲಿ ಕುಳಿತು ಸೋಮಣ್ಣನವರು ಈ ಮಾತು ಹೇಳಿಲ್ಲ. ಆದರೆ ಸದಾನಂದ ಗೌಡರ ಹೃದಯ ಚೂರು ಚೂರು ಆಗುವ ಹಾಗೆ ದೂರದ ರಾಯಚೂರಿನಲ್ಲಿ ಸೋಮಣ್ಣ ಈ ಭವಿಷ್ಯ ನುಡಿದಿದ್ದಾರೆ.
'ನೋಡ್ತಿರಿ. ಜಸ್ಟ್ ಆಗಸ್ಟ್ 30 ಕಳೀಲಿ. ರಾಜ್ಯ ಬಿಜೆಪಿಗೆ ಹಿಡಿದಿರುವ ಗ್ರಹಣ ಕಳೀತದೆ. ಸಣ್ಣಪುಟ್ಟ ಗ್ರಹಗಳ ಕಾಟವಿದೆ. ಶೀಘ್ರವೇ ಅದು ನಿವಾರಣೆಯಾಗಲಿದೆ' ಎಂದು ಸಚಿವ ಸೋಮಣ್ಣ ತುಂಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂತಹ ಭವಿಷ್ಯ ನುಡಿಯಲು ಸನ್ಮಾನ್ಯ ಸೋಮಣ್ಣನವರಿಗೆ ಯಾವ ಭಗವತ್ಪ್ರೇರಣೆಯಾಯಿತೋ ಸಾಕ್ಷಾತ್ ಆ ಸೋಮೇಶ್ವನೇ ಹೇಳಬೇಕು. ಅಂತೂ ಸೋಮಣ್ಣ ಭವಿಷ್ಯ ಹೇಳಿಯಾಗಿದೆ. ಇನ್ನು ನಾಡಿನ ಜನತೆ ಆಗಸ್ಟ್ 30 ಕಳೆಯುವುದನ್ನೇ ಕಾಯಬೇಕು.
ಈ ಮಧ್ಯೆ ಸೋಮಣ್ಣನವರು ತಮ್ಮ ಹಿತಶತ್ರುಗಳ ಬಗ್ಗೆ ಯಾಕೋ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ: ಎಲ್ಲ ಪಕ್ಷಗಳಲ್ಲೂ ಭಿನ್ನಮತ ಸಹಜವಾಗಿದೆ. (ಬಹುಶಃ, ಗೆಳೆಯ ಸಿದ್ರಾಮಯ್ಯನವರ ಬಂಡಾಯದಿಂದ ಪ್ರೇರಣೆಗೊಂಡು ಈ ಮಾತು ಹೇಳಿರಬೇಕು). ಆದರೆ ಬಿಜೆಪಿಯಲ್ಲಿನ ಅಂತಃ ಕಲಹವನ್ನು, ಆಂತರಿಕ ಅಸಮಾಧಾನಗಳನ್ನು ತುಸು ಹೆಚ್ಚೇ ಎನಿಸುವಷ್ಟು ವೈಭವೀಕರಿಸಲಾಗುತ್ತಿದೆ ಎಂದು ಸೋಮಣ್ಣ ತಮ್ಮ ದುಃಖ ತೋಡಿಕೊಂಡಿದ್ದಾರೆ.
ಭ್ರಷ್ಟಾಚಾರದ ಪ್ರಕರಣಗಳು ಹೊರಬರುತ್ತಿರುವ ಬಗ್ಗೆ ಜನತೆಗೆ ಬೇಸರವಾಗಿರುವುದು ನಿಜ. (ಸೋಮಣ್ಣ ಇದನ್ನು ಹೇಳುವ ವೇಳೆಗೆ ಸಂಪಂಗಿ ಜೈಲಂಗಿ ಧರಿಸಿದ್ದಾರೆ ಎಂಬ ಕಠೋರ ವಾರ್ತೆ ಅವರ ಕಿವಿಗೆ ಬಿದ್ದಿತ್ತು). ಡಿನೋಟಿಫಿಕೇಶನ್ ಎಂಬುದು ಮಾಜಿ ಸಿಎಂ ವೀರೇಂದ್ರ ಪಾಟೀಲರ ಕಾಲದಿಂದಲೂ ನಡೆದು ಬಂದಿದೆ.
ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಅದಕ್ಕೆ ಹೆಚ್ಚಿನ ಬಣ್ಣ ಬಳಿಯಲಾಗಿದೆ ಎಂದು ಸೋಮಣ್ಣ ಪೇಲವ ನಗೆಹೊತ್ತು ಹೇಳಿದರು.












Click it and Unblock the Notifications