ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಜಾಮೀನು ಇಲ್ಲ
ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಗಾಲಿ ರೆಡ್ಡಿ ಅವರಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಆಕ್ಷೇಪ ಸಲ್ಲಿಸಿತ್ತು.
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸಿಬಿಐ ವಿಶೇಷ ನ್ಯಾಯಾಲಯ ಎರಡೂ ಕಡೆ ವಾದ ಪ್ರತಿವಾದವನ್ನು ಆಲಿಸಿದ್ದು, ತೀರ್ಪನ್ನು ಮೇ.30ಕ್ಕೆ ಕಾಯ್ದಿರಿಸಿತ್ತು. ಬುಧವಾರ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಟ್ರಕ್ ಗಟ್ಟಲೆ ದಾಖಲೆ: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿ ಅವರ ಅಕ್ರಮ ಕುರಿತ ದಾಖಲೆಗಳನ್ನು ಹೊತ್ತ ಸುಮಾರು 9 ಟ್ರಕ್ ಗಳನ್ನು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿಲ್ಲಿಸಲಾಗಿತ್ತು.
ನಂತರ ಎಲ್ಲಾ ಸೀಲ್ ಮಾಡಿದ ಬಾಕ್ಸ್ ಗಳಲ್ಲಿದ್ದ ಭಾರಿ ಗಾತ್ರದ ಕಡತಗಳನ್ನು ಕೋರ್ಟಿಗೆ ಒಪ್ಪಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯಬೇಕಿದೆ. ಸರ್ಕಾರಕ್ಕೆ ಕೋಟಿಗಟ್ಟಲೇ ನಷ್ಟವುಂಟಾಗಿದೆ ಎಂದು ಸಿಬಿಐ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ. ಸುಧೀಂದ್ರರಾವ್ ಅವರು ಪುರಸ್ಕರಿಸಿದರು.
ಸಿಬಿಐ ಸಲ್ಲಿಸಿರುವ ದಾಖಲೆಗಳಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದ್ದು, 15 ಗಣಿ ಗುತ್ತಿಗೆದಾರ ಸಂಸ್ಥೆಗಳಿಗೆ ರಿಲೀಫ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
2008 ರಿಂದ 2010 ಅವಧಿಯಲ್ಲಿ 15ಕ್ಕೂ ಅಧಿಕ ಗಣಿ ಗುತ್ತಿಗೆ ಸಂಸ್ಥೆಗಳನ್ನು ಗಾಲಿ ರೆಡ್ಡಿ ಪೀಡಿಸಿ ಹಣ ಸಂಗ್ರಹಿಸಿದ ಬಗ್ಗೆ ಸಮಗ್ರ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆ. ಆದರೆ, ಚಾರ್ಜ್ ಶೀಟ್ ನಲ್ಲಿ 15 ಕಂಪನಿಯ ಯಾವೊಬ್ಬ ಅಧಿಕಾರಿಯ ಹೆಸರನ್ನು ನಮೂದಿಸದಿರಲು ಸಿಬಿಐ ನಿರ್ಧರಿಸಿದೆ.
ಮೇಲ್ಕಂಡ ಅವಧಿಯಲ್ಲಿ ಸುಮಾರು 2,000 ಕೋಟಿ ರು.ಗೂ ಅಧಿಕ ಮೊತ್ತದ 45 ಲಕ್ಷ ಟನ್ ಗಳಷ್ಟು ಕಬ್ಬಿಣ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಆರೋಪ ಹೊರೆಸಲಾಗಿದೆ.
ಕೇಸ್ ಹಿಸ್ಟರಿ: ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಾಡಿ ವಾರೆಂಟ್ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು.
ಓಎಂಸಿ ಪ್ರಕರಣದಲ್ಲಿ ಗಾಲಿ ರೆಡ್ಡಿ ಪಡೆದಿದ್ದ ಜಾಮೀನನ್ನು ಜೂ.5ರವರೆಗೂ ತಡೆ ಹಿಡಿದು ನಾಂಪಲ್ಲಿ ಸಿಬಿಐ ಕೋರ್ಟ್ ಆದೇಶ ನೀಡಿದೆ. ಮೇ 30 ರಂದು ಬೆಂಗಳೂರು ನ್ಯಾಯಾಲಯದಲ್ಲಿ ಜಾಮೀನು ಸಿಗದಿರುವುದರಿಂದ ಜೂ.5 ರಂದು ಹೈದರಾಬಾದಿನ ಕೋರ್ಟ್ ಆದೇಶಕ್ಕಾಗಿ ಗಾಲಿ ರೆಡ್ಡಿ ಕಾಯಬೇಕಾಗುತ್ತದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರಲು ಆಗುತ್ತಿಲ್ಲ. ಮತ್ತೊಮ್ಮೆ ರೆಡ್ಡಿಗಾಗಿ ಚಂಚಲಗುಡ ಜೈಲು ಬಾಗಿಲು ತೆರೆದುಕೊಳ್ಳುತ್ತಿದೆ.