ಡಿಜಿಪಿ: ಶಂಕರ ಬಿದರಿ ಹೋರಾಟಕ್ಕೆ ಭಾರಿ ಸೋಲು

ಗಮನಾರ್ಹವೆಂದರೆ ಇನ್ಫ್ಯಾಂಟ್ ಸೇವಾವಧಿ ಇನ್ನು ಮೂರು ದಿನಕ್ಕೆ ಮುಕ್ತಾವಾಗಲಿದೆ. ಆದ್ದರಿಂದ ಸೇವಾ ಹಿರಿತನ ಹೊಂದಿರುವ ಐಪಿಎಸ್ (ಕರ್ನಾಟಕ ಕೇಡರ್) ಅಧಿಕಾರಿ, ಮಿಜೋರಾಮ್ ರಾಜ್ಯದ ಲಾಲ್ ರೋಕುಮಾ ಪಚಾವ್ ಅವರು ಡಿಜಿಪಿಯಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಮಹತ್ವದ ತೀರ್ಪು: ಭಾರಿ ಕಾನೂನು ಹೋರಾಟ ನಡೆಸಿದ್ದ ಶಂಕರ ಬಿದರಿ ಆ ಸ್ಥಾನಕ್ಕೆ ಅರ್ಹರಲ್ಲ ಎಂದು ಹೈಕೋರ್ಟ್ ಸೋಮವಾರ ಪುನರುಚ್ಚರಿಸಿದೆ. ಇದರಿಂದ ಇನ್ನು 3 ದಿನಗಳ ಸೇವಾವಧಿ ಬಾಕಿ ಹೊಂದಿರುವ ಬಿದರಿ ಅವರು ಡಿಜಿ-ಐಜಿಪಿ ಹುದ್ದೆಗೇರುವ ಕನಸು ಕೈಕೊಟ್ಟಿದೆ. ಪೊಲೀಸ್ ಗೃಹನಿರ್ಮಾಣ ನಿಗಮದ ಡಿ.ಜಿ.ಯಾಗಿ ಅವರು ತಮ್ಮ ಐಪಿಎಸ್ ಆಳ್ವಿಕೆಯನ್ನು ಮುಗಿಸಲಿದ್ದಾರೆ.
'ಕಳಂಕಿತ' ಬಿದರಿಯನ್ನು ಡಿಜಿಪಿಯನ್ನಾಗಿ ನೇಮಕ ಮಾಡಿದ್ದ ಕೇಂದ್ರ ಲೋಕಸೇವಾ ಆಯೋಗದ (UPSC) ಆದೇಶವು ದೋಷಪೂರಿತ ಎಂದು ನ್ಯಾಯಮೂರ್ತಿಗಳಾದ ಎನ್ ಕುಮಾರ್ ಹಾಗೂ ಎಚ್ಎಸ್ ಕೆಂಪಣ್ಣ ಅವರ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಇದೇ ವೇಳೆ ಬಿದರಿ ಅವರೇ ಡಿಜಿ-ಐಜಿಪಿಯಾಗಿ ಮುಂದುವರಿಯಲು ಅನುವು ಮಾಡಿಕೊಡಬೇಕೆಂದು ಪ್ರತ್ಯೇಕ ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರಕ್ಕೂ ತೀವ್ರ ಮುಖಭಂಗವಾಗಿದೆ.
ನರಹಂತಕ ವೀರಪ್ಪನ್ ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯಪಡೆಯ ಕಮಾಂಡಂಟ್ ಆಗಿದ್ದ ತಮ್ಮ ವಿರುದ್ಧ ವೈಯಕ್ತಿಕವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ನ್ಯಾ. ಸದಾಶಿವ ಆಯೋಗ ಯಾವುದೇ ವರದಿ ನೀಡಿಲ್ಲ.
ಆದರೂ ತಮ್ಮ ವಿರುದ್ಧವಾಗಿಯೇ ಹೈಕೋರ್ಟ್ ಈ ಹಿಂದೆ ಆದೇಶ ಹೊರಡಿಸಿದೆ ಎನ್ನುವುದು ಸುಪ್ರೀಂಕೋರ್ಟ್ನಲ್ಲಿ ಬಿದರಿ ಅವರ ಮುಖ್ಯ ವಾದವಾಗಿತ್ತು. ಆದುದರಿಂದ ವರದಿಯನ್ನು ಪರಿಶೀಲಿಸಿ ಪುನಃ ಆದೇಶ ಹೊರಡಿಸಬೇಕು ಎಂದು ಸುಪ್ರೀಂಕೋರ್ಟ್ ಸಹ ಹೈಕೋರ್ಟ್ಗೆ ನಿರ್ದೇಶಿಸಿತ್ತು.
ಬಿದರಿ ನೇತೃತ್ವದ ಕಾರ್ಯಪಡೆ ಎಸಗಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಕುರಿತು ಈ ಎರಡೂ ಆಯೋಗಗಳು ಯಾವ ಯಾವ ಪ್ಯಾರಾಗಳಲ್ಲಿ ಏನೇನು ವರದಿ ನೀಡಿವೆ ಎಂಬ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು, ಸೋಮವಾರ ಹೊರಡಿಸಿದ 144 ಪುಟಗಳ ತೀರ್ಪಿನಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ.
ಆದರೆ ಈ ವರದಿಯನ್ನು ಕೇಂದ್ರ ಲೋಕಸೇವಾ ಆಯೋಗದ ಮುಂದೆ ಸರ್ಕಾರ ಇಟ್ಟಿಲ್ಲ. ಒಂದು ವೇಳೆ ವರದಿಯನ್ನು UPSC ಗಮನಕ್ಕೆ ತಂದಿದ್ದರೆ ಬಿದರಿ ಹೆಸರನ್ನು ಅದು ಡಿಜಿ-ಐಜಿಪಿ ಹುದ್ದೆಗೆ ಶಿಫಾರಸು ಮಾಡುತ್ತಿರಲಿಲ್ಲ ಎಂದೂ ಪೀಠ ವ್ಯಾಖ್ಯಾನಿಸಿದೆ.












Click it and Unblock the Notifications