ಅಕ್ರಮ ಆಸ್ತಿ : ಸಿಬಿಐನಿಂದ ಜಗನ್ಮೋಹನ್ ರೆಡ್ಡಿ ಬಂಧನ
ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120(ಬಿ), 409, 420 ಮತ್ತು 477 ಸೆಕ್ಷನ್ ಅಡಿಗಳಲ್ಲಿ ರೆಡ್ಡಿಯನ್ನು ಬಂಧಿಸಲಾಗಿದೆ. ಜಗನ್ಮೋಹನ್ ಅಭಿಮಾನಿಗಳು ಹಿಂಸಾಚಾರಕ್ಕಿಳಿಯುವ ಸಂಭವನೀಯತೆ ಇರುವುದರಿಂದ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದ್ದು, ಪ್ರತಿಬಂಧಕಾಜ್ಞೆಯನ್ನು ಜಾರಿಮಾಡಲಾಗಿದೆ.
ಕಡಪಾದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಆ ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳ ಸಂಖ್ಯೆಯನ್ನು ಕೂಡ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಡಿತಗೊಳಿಸಿದೆ. ಮುಂಜಾಗ್ರತಾ ಕ್ರಮವಾಗಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಜಮಂಡ್ರಿಯಲ್ಲಿ ಒಂದು ಬಸ್ ಮೇಲೆ ಕಲ್ಲು ತೂರಲಾಗಿದ್ದರೆ, ಕಡಪಾದಲ್ಲಿ ಕರ್ಫ್ಯೂ ರೀತಿಯ ಸ್ಥಿತಿ ನಿರ್ಮಾಣವಾಗಿದೆ. ಕೇಬಲ್ ಟಿವಿ ಸಂಪರ್ಕವನ್ನು ಕೂಡ ಕಡಿತ ಮಾಡಲಾಗಿದೆ.
ಜಗನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಜಗನ್ ತಾಯಿ ವಿಜಯಮ್ಮ, ಹೆಂಡತಿ ಭಾರತಿ, ತಂಗಿ ಶರ್ಮಿಳಾ, ಭಾವ ಅನಿಲ್ ಕುಮಾರ್ ಅವರು ಜಗನ್ ಇದ್ದಿದ್ದ ದಿಲ್ಕುಶ ಅತಿಥಿಗೃಹಕ್ಕೆ ದೌಡಾಯಿಸಿದರು. ಜಗನ್ ಅವರನ್ನು ಸೋಮವಾರ ವಿಶೇಷ ಸಿಬಿಐ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತಿದೆ.