ನರೇಂದ್ರ ಮೋದಿ ಪ್ರಧಾನಿಯಾಗಲಿ: ಯಡಿಯೂರಪ್ಪ
'ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಲು ಎಲ್ಲಾ ರೀತಿಯಿಂದಲೂ ಅರ್ಹತೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದ ಯಾವುದೇ ಉನ್ನತ ಹುದ್ದೆ ಮೋದಿ ಸೂಕ್ತ ವ್ಯಕ್ತಿ' ಎಂದು ಮತ್ತೊಮ್ಮೆ ಮೋದಿಯನ್ನು ಹೊಗಳುವ ಮೂಲಕ ಪರೋಕ್ಷವಾಗಿ ನಿತಿನ್ ಗಡ್ಕರಿ ಮೇಲೆ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಗೆ ನಾನು ಗೈರು ಹಾಜರಾಗಲು ವೈಯಕ್ತಿಕ ಕೆಲ ಸಮಸ್ಯೆಗಳು ಕಾರಣ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮೋದಿ ನೆರಳಲ್ಲಿ ಯಡಿಯೂರಪ್ಪ: ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೊರಟ ಯಡಿಯೂರಪ್ಪ ಅವರು ಇಂದು ಅಧಿಕಾರ ವಂಚಿತರಾಗಿ ಮನೆಯಲ್ಲಿ ಕೂತಿದ್ದಾರೆ. ಆಗಾಗ ಜೈಲು, ಕೋರ್ಟ್ ದರ್ಶನ ಇದ್ದೇ ಇದೆ. ಈ ನಡುವೆ ಹೊಸ ಕಚೇರಿ, ಜನಸಂಪರ್ಕ ಕಾರ್ಯಕ್ರಮ ಎಂಬ ವಿಫಲ ಯತ್ನ ಕೂಡಾ ಸಾಗಿದೆ.
ಹಲವು ವಿಷಯಗಳಲ್ಲಿ ಮೋದಿ ಅವರ ಹೆಜ್ಜೆಯಲ್ಲೇ ಯಡಿಯುರಪ್ಪ ಸಾಗಿದ್ದಾರೆ. ಬಿಜೆಪಿ ಹೈ ಕಮಾಂಡ್ ಎದುರು ಹಾಕಿಕೊಳ್ಳುವುದಿರಲಿ, ತಮ್ಮ ಬೆಂಬಲಿಗರನ್ನು ರಕ್ಷಿಸುವುದಿರಲಿ ಮೋದಿಯನ್ನೇ ಯಡಿಯೂರಪ್ಪ ಅನುಸರಿಸಿದ್ದಾರೆ.
ಈಗ ಮೋದಿಯಂತೆ ಯಡಿಯೂರಪ್ಪ ಕೂಡಾ ರಾಷ್ಟ್ರೀಯ ಕಾರ್ಯಕಾರಿಗೆ ಹೋಗದೆ ಸೆಡ್ಡು ಹೊಡೆದಿದ್ದಾರೆ. ನಿತಿನ್ ಗಡ್ಕರಿಗೆ ಇದರಿಂದ ಭಾರಿ ಮುಖಭಂಗವಾಗಿದೆ. ಮೋದಿ ಪರ ನಿಲುವು ತಾಳಿರುವ ಯಡಿಯೂರಪ್ಪ ರಾಷ್ಟ್ರೀಯ ಮಟ್ಟದಲ್ಲೂ ಸಂಚಲನ ಉಂಟು ಮಾಡಿದರೆ ಅಚ್ಚರಿಯೇನಿಲ್ಲ.
ಕಾರ್ಯಕಾರಿ ಸಭೆ ಮಹತ್ವ ಏನು? : ಮುಂಬರುವ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಕಾರ್ಯತಂತ್ರ, ಯಾವ ರಾಜ್ಯಕ್ಕೆ ಯಾರು ಉಸ್ತುವಾರಿ,
ಹಾಗೂ ಮುಖ್ಯವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ಮುಂದುವರಿಕೆ ಮತ್ತು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಯಲಿದೆ.
ಗುಜರಾತ್ ಚುನಾವಣೆ ಸಾರಥ್ಯ ವಹಿಸಿಕೊಂಡಿದ್ದ ಸಂಜಯ್ ಜೋಶಿ ರಾಜೀನಾಮೆ ನೀಡಿರುವುದರಿಂದ ಮೋದಿಗೆ ಮೇಲುಗೈ ದೊರೆತಿದೆ. ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ಗಡ್ಕರಿ ಇನ್ನೂ ಮೂರು ವರ್ಷಗಳ ಕಾಲ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ.
ಬಿಜೆಪಿಯ ಅಘೋಷಿತ ಪ್ರಧಾನಿ ಅಭ್ಯರ್ಥಿ ಎನಿಸಿರುವ ಮೋದಿ ಅವರ ಬಗ್ಗೆ ಕೆಲ ಹಿರಿಯ ನಾಯಕರು ಅಪಸ್ವರ ಹಾಡುತ್ತಿರುವುದು ಮೋದಿಗೆ ಸಹಿಸಲು ಸಾಧ್ಯವಾಗಿಲ್ಲ.