ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಈಶ್ವರಪ್ಪ ಗ್ಯಾಂಗ್ ನಿರ್ಣಯ
ಬೆಂಬಲಿಗ ಸಚಿವರು, ಶಾಸಕರು ಆಡಿದ ರಾಜೀನಾಮೆಯ ನಾಟಕವಾಡಿದ್ದು, ಕೆಲ ಶಾಸಕರೊಂದಿಗೆ ಹೈಕಮಾಂಡ್ ಸಂಧಾನದ ಮಾತುಕತೆಯಾಡಿದ್ದು, ನಂತರ ಯಡಿಯೂರಪ್ಪ ರಾಜೀನಾಮೆಯನ್ನು ಮುಂದೂಡಿ ಅನಂತ್ ಕುಮಾರ್, ಸದಾನಂದ ಗೌಡ, ಈಶ್ವರಪ್ಪನವರ ಮೇಲೆ ಉರಿದುಕೊಂಡು ಬಿದ್ದಿದ್ದು, ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಜ್ವಾಲಾಮುಖಿ ಸ್ಫೋಟಿಸಿದಂತಾಗಿದೆ.
ಜೈಲಿಗೆ ಹೋದ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ, ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದ ಬೈಯುತ್ತಿರುತ್ತಾರೆ ಎಂದು ಎಂದು ಹೇಳಿದ್ದ ಈಶ್ವರಪ್ಪ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಬಹಿರಂಗವಾಗಿ ಏನನ್ನೂ ಹೇಳದಂತೆ ಬಿಎಸ್ವೈ ಬಾಯಿಗೆ ಬೀಗ ಜಡಿಯುವಂತೆ ಮನವಿ ಮಾಡಲಿದ್ದಾರೆ.
ಈ ಸಭೆಯಲ್ಲಿ ಈಶ್ವರಪ್ಪ, ಸದಾನಂದ ಗೌಡ, ಅನಂತ್ ಕುಮಾರ್, ಆರ್ ಅಶೋಕ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ ಮುಂತಾದವರು ಭಾಗಿಯಾಗಿ, ಗೌಡರ ಬಣದ ರಾಜ್ಯದ ಬಿಜೆಪಿ ನಾಯಕರನ್ನು ವಾಚಾಮಗೋಚರ ಬೈದ ಯಡಿಯೂರಪ್ಪನವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಬಿಎಸ್ವೈ ಅವರ ಬೆಂಬಲಿಗರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮತ್ತೊಮ್ಮೆ ದೂರು ನೀಡಲಿದ್ದಾರೆ.
ಈ ನಿರ್ಣಯದಿಂದ ಸದ್ಯಕ್ಕೆ ಶಾಂತವಾಗಿದ್ದ ಭಿನ್ನಮತ ಮತ್ತೆ ಸ್ಫೋಟಿಸಿದಂತಾಗಿದೆ. ಯಡಿಯೂರಪ್ಪ ರಾಜೀನಾಮೆ ನೀಡುವುದಿಲ್ಲ, ಪಕ್ಷ ತೊರೆಯುವುದಿಲ್ಲ, ಭಿನ್ನಮತ ಶಮನ ಮಾಡಲು ಸಹಕರಿಸುತ್ತಾರೆ ಎಂದು ಹೇಳುತ್ತಿದ್ದ ಈಶ್ವರಪ್ಪ ಮತ್ತಿತರರೇ ಈಗ ಮತ್ತೆ ಯಡಿಯೂರಪ್ಪ ವಿರುದ್ಧ ಕತ್ತಿ ಬೀಸಲು ಸಜ್ಜಾಗಿದ್ದಾರೆ. ಬೀಸೋ ದೊಣ್ಣೆ ತಪ್ಪಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ದೆಹಲಿ ನಾಯಕರಿಗೆ ಮತ್ತೆ ತಲೆಬಿಸಿಯಾಗುವ ಎಲ್ಲ ಲಕ್ಷಣಗಳು ಕಾಣಿಸಿಕೊಂಡಿವೆ.
ಆದರೆ, ಬಿಜೆಪಿ ಹೈಕಮಾಂಡ್ ಮಾತ್ರ ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ವಿಧಾನಸಭೆ ಚುನಾವಣೆ ಕೇವಲ ಒಂದು ವರ್ಷ ಇರುವಾಗ ಯಡಿಯೂರಪ್ಪನವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ದೆಹಲಿ ನಾಯಕರಿಲ್ಲ. ಮತ್ತು ಮುಂದಿನ ಚುನಾವಣೆಯನ್ನು ಯಡಿಯೂರಪ್ಪ ಇಲ್ಲದ ಸದಾನಂದ ಗೌಡ ನೇತೃತ್ವದ ಪಕ್ಷ ಗೆಲ್ಲುತ್ತದೆಂಬ ವಿಶ್ವಾಸವೂ ಇಲ್ಲ. ಹೈಕಮಾಂಡಿನ ಅಶಕ್ತತೆಯನ್ನು ಯಡಿಯೂರಪ್ಪ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವುದಂತೂ ಸ್ಪಷ್ಟ.