ಶೆಟ್ಟರ್ ಗೆ ಡಿಸಿಎಂ & ಸಿಎಂ ಸ್ಥಾನದ ಆಫರ್

ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ಬೇಕು ಎನ್ನುವುದು ನನ್ನ ಅಭಿಪ್ರಾಯ. ಪಕ್ಷದಲ್ಲಿ ನಾನು ಯಾರ ಜೊತೆಗೂ ಇಲ್ಲ. ಯಾರ ಜೊತೆಗೂ ಭಿನ್ನಾಭಿಪ್ರಾಯ ಬೆಳೆಸಿಕೊಂಡಿಲ್ಲ. ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ಬಿಎಎಸ್ ವೈ ಬಣದ ಯೋಜನೆ : ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧ ಪತ್ರ ಚಳವಳಿ ಮಾಡಿರುವ ಯಡಿಯೂರಪ್ಪ ಬೆಂಬಲಿಗರು ಶಾಸಕಾಂಗ ಸಭೆಗೆ ಒತ್ತಾಯಿಸುತ್ತಿರುವ ಹಿಂದಿನ ಕಾರಣ ಬಹಿರಂಗವಾಗಿದೆ. ಯಡಿಯೂರಪ್ಪ ಬೆಂಬಲಿಗರ ವಿರುದ್ಧ ಪಕ್ಷ ವಿರೋಧಿ ಆರೋಪ ಮಾಡಿ ಬರೆದಿರುವ ಪತ್ರಕ್ಕೆ ಸ್ಪಷ್ಟನೆ ನೀಡಬೇಕು. ಸರ್ಕಾರ ಉಳಿಯಬೇಕಾದರೆ ಸದಾನಂದ ಗೌಡರು ಸಿಎಂ ಸ್ಥಾನದಿಂದ ಕೆಳಗಿಳಿದು ಜಗದೀಶ್ ಶೆಟ್ಟರ್ ರನ್ನು ಅಲ್ಲಿ ಕೂರಿಸಬೇಕು ಎಂಬುದು ಯಡಿಯೂರಪ್ಪ ಬಣದ ಯೋಜನೆ ಹಾಗೂ ವಾದ.
ಆದರೆ, ಈ ವಾದವನ್ನು ಪ್ರಬಲವಾಗಿ ಮಂಡಿಸಲು ಯಡಿಯೂರಪ್ಪ ಬಣಕ್ಕೆ ಸಾಕಷ್ಟು ಶಾಸಕರ ಬೆಂಬಲ ಇನ್ನೂ ಸಿಕ್ಕಿಲ್ಲ. ಅಲ್ಲದೆ,. ಯುದ್ಧಕ್ಕೆ ಮುನ್ನವೇ ಬಸವರಾಜ ಬೊಮ್ಮಾಯಿ ಶಸ್ತ್ರ ತ್ಯಾಗ ಮಾಡಿದ್ದಾರೆ. ಪಕ್ಷ ವಿರೋಧಿ ಆರೋಪ ಹೊತ್ತು ಸಚಿವನಾಗಿ ಮುಂದುವರೆಯುವುದು ಸಾಧ್ಯವಿಲ್ಲ. ಯಾವಾಗ ಬೇಕಾದರೂ ಕೇಳಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಸದಾನಂದ ಗೌಡರಿಗೆ ಕೇಳಿಸುವಂತೆ ಹೇಳಿದ್ದಾರೆ. ಇದು ಯಡಿಯೂರಪ್ಪ ಬಣಕ್ಕೆ ಹಿನ್ನೆಡೆಯಾಗಿದೆ.
ಸದಾ ಪ್ಲ್ಯಾನ್ : ಈ ನಡುವೆ ಪಕ್ಷದ ಹಿರಿಯ ತಲೆಗಳನ್ನು ಪಕ್ಷದ ಸಂಘಟನೆಗೆ ನೇಮಿಸಿ ಸಿಟಿ ರವಿ, ಸೊಗಡು ಶಿವಣ್ಣ, ಜೀವರಾಜ್ ಸೇರಿದಂತೆ ಮುಂತಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸದಾನಂದ ಗೌಡರ ಮೊದಲ ಹೆಜ್ಜೆಯಾಗಿತ್ತು. ಜೊತೆಗೆ ಲಿಂಗಾಯತ ನಾಯಕರು, ಉತ್ತರ ಕರ್ನಾಟಕ, ಯಡಿಯೂರಪ್ಪ ಬಣಕ್ಕೆ ಸಮಾಧಾನ ಪಡಿಸಲು ಜಗದೀಶ್ ಶೆಟ್ಟರ್ ರನ್ನು ಡಿಸಿಎಂ ಮಾಡಲು ಮುಂದಾಗಿದ್ದರು. ಆದರೆ, ಈಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ.












Click it and Unblock the Notifications