ಜಾಮೀನು ಬೇಡ: ಜಗನ್ ಚಾಲಾಕಿ ನಡೆ
ಸಿಬಿಐ ತಮ್ಮನ್ನು ಆಟವಾಡಿಸುತ್ತಿದೆ ಎಂದು ಬಗೆದಿರುವ ಜಗನ್, ಸಿಬಿಐ ಕರ್ನಾಟಕದ ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿಯನ್ನು ಬಂಧಿಸಿ, ತನ್ನ ಅಧೀನದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಆಂಧ್ರದಲ್ಲಿ ರಾಜಕೀಯವಾಗಿ ತಾನು ಗಾಲಿ ರೆಡ್ಡಿಯಲ್ಲ ಎಂಬುದು 'ದಿಲ್ಲಿ ಸಿಬಿಐ'ಗೂ ಮನವರಿಕೆಯಾಗಿದ್ದರಿಂದ ಬಂಧನ ದೂರದ ಮಾತು ಎಂದುಕೊಂಡು ಜಗನ್ ಸುಮ್ಮನಾಗಿದ್ದಾರೆ.
ಆದರೆ ಈ ಬಾರಿ ಖುದ್ದು ಕೋರ್ಟ್ ಸಮನ್ಸ್ ನೀಡಿದೆ. ತನ್ನ ವಿರುದ್ಧ ಸಿಬಿಐ ಸರಿಯಾದ ಕೇಸನ್ನೇ ದಾಖಲಿಸಿಲ್ಲ. ಆದರೂ ಸಮನ್ಸ್ ಜಾರಿ ಮಾಡಿದೆ ಎಂದು ಅದರ ವಿರುದ್ಧ ಜಗನ್ ಹೈಕೋರ್ಟ್ ಮೊರೆ ಹೋಗಬಹುದು. ಆದರೆ ಜಗನ್ ನಿಕಟವರ್ತಿಗಳ ಪ್ರಕಾರ ಜಗನ್ ಗೆ ಅದು ಬೇಕಾಗಿಲ್ಲ.
ರಾಜಕೀಯ ನಡೆಯಾಗಿ ಸ್ವತಃ ಕೋರ್ಟ್ ಕಟೆಕಟೆಯಲ್ಲಿ ನಿಲ್ಲುವುದು ಜಗನ್ ಗೆ ಬೇಕಾಗಿದೆ. ಮೊದಲು ಕಟೆಕಟೆಯಲ್ಲಿ ನಿಲ್ಲೋಣ. ನಂತರ ಅಲ್ಲಿ ಏನಾಗುತ್ತದೋ ನೋಡಿಕೊಂಡು ನಮ್ಮ ನಡೆ ಚಲಾಯಿಸಿದರೆ ಆಯಿತು ಎಂಬುದು ಜಗನ್ ವಕೀಲರ ನಿಲುವು.
ಕೋರ್ಟಿನಲ್ಲಿ ಮೇ 28ರಂದು ಹಾಜರಾಗಿ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯನ್ನು ಅಧಿಕೃತವಾಗಿ ಆರೋಪಿಯಾದ ತನಗೆ ನೀಡುವಂತೆ ಜಗನ್ ಮನವಿ ಮಾಡಿಕೊಳ್ಳಬಹುದು. ಆ ವೇಳೆಯೇ ಜಾಮೀನು ಅರ್ಜಿಯನ್ನೂ ಗುಜರಾಯಿಸಬಹುದು. ಅಥವಾ ಪ್ರಕರಣದಲ್ಲಿ ತಾನು ತಪ್ಪಿತಸ್ಥನಲ್ಲ ಎಂದು ಜಡ್ಗ್ ಗಮನ ಸೆಳೆಯಬಹುದು. ಆಗ ಜಗನ್ ಮನವಿಯನ್ನು ಪರಿಗಣಿಸಿ, ಕೋರ್ಟ್ ಜಾಮೀನು ಮೇಲೆ ಬಿಡುಗಡೆಗೊಳಿಸುವ ಸಾಧ್ಯತೆಗಳೇ ಹೆಚ್ಚಾಗಿವೆ.
ಆದರೆ ಸಿಬಿಐ, ಇದುವರೆಗೆ ಆರೋಪಿ ನಂಬರ್ 1 ಜಗನ್ ರನ್ನು ತಾನು ವಿಚಾರಣೆಗೇ ಒಳಪಡಿಸಿಲ್ಲ. ಆದ್ದರಿಂದ ಅವರನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಮೈ ಲಾರ್ಡ್ ಎಂದು ಸಿಬಿಐ ಜಡ್ಗ್ ಪುಲ್ಲಯ್ಯ ಅವರಿಗೆ ಮನವಿ ಮಾಡಬಹುದು.