ಸೋನಿಯಾ-ಯಡಿಯೂರಪ್ಪ ಮುಖಾಮುಖಿ ಇಲ್ಲ
ಆದರೆ ತಾಜಾ ವರದಿಯ ಪ್ರಕಾರ ಯಡಿಯೂರಪ್ಪ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಈ ಪ್ರತಿಷ್ಠಿತ ಕಾರ್ಯಕ್ರಮದಿಂದ ಸ್ವತಃ ದೂರವುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸ್ವಾಮೀಜಿಗಳ ಜನ್ಮದಿನ ಸಮಾರಂಭದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳದಿರುವ ಕುರಿತು ಸಿದ್ದಗಂಗಾ ಶ್ರೀಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದಗಂಗಾ ಮಠದಲ್ಲಿ ನಡೆಯುವ ಜಯಂತ್ಯುತ್ಸವದಲ್ಲಿ ಸೋನಿಯಾ ಮತ್ತು ಯಡಿಯೂರಪ್ಪ ಅವರುಗಳು ಮುಖಾಮುಖಿಯಾಗುವ ಸಾಧ್ಯತೆಯಿತ್ತು. ಇದು ರಾಜ್ಯ ಕಾಂಗ್ರೆಸ್ ಅಸಮ್ಮತವಾಗಿತ್ತು. ಆದರೆ ಬದಲಾದ ರಾಜಕೀಯ ಸಮೀಕರಣಗಳಲ್ಲಿ ಯಡಿಯೂರಪ್ಪ ಅವರು ಸೋನಿಯಾರನ್ನು ಭೇಟಿ ಮಾಡುವ ತವಕದಲ್ಲಿದ್ದರು ಎಂದು ಆಪ್ತ ಮೂಲಗಳಿಂದ ತಿಳಿದುಬಂದಿತ್ತು.
ಬೇರೆಯದೇ ಮುಖವೂ ಇದೆ: ಸಿದ್ದಗಂಗಾ ಮಠದಲ್ಲಿ ಸೋನಿಯಾ ಮೇಡಂ-ಯಡಿಯೂರಪ್ಪ ಮುಖಾಮುಖಿಯಾಗುತ್ತಿಲ್ಲ ಎಂಬುದಕ್ಕೆ ಬೇರೆಯದೇ ಮುಖವೂ ಇದೆ. ಸಿದ್ದಗಂಗೆಯ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ 105ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೊರತುಪಡಿಸಿ ಬೇರೆ ಯಾವ ಪಕ್ಷದ ರಾಜಕಾರಣಿಯನ್ನೂ ವೇದಿಕೆಗೆ ಆಹ್ವಾನಿಸಲಾಗಿಲ್ಲ ಎನ್ನಲಾಗಿದೆ.