ಆಡಿಟರ್ ಸಾಯಿ ರೆಡ್ಡಿ ಸಿಬಿಐಗೆ ಶರಣು, ಜಗನ್ನಿಗೆ ನಡುಕ

ವಿಜಯ ಸಾಯಿರೆಡ್ಡಿ ಶರಣಾಗತಿ ನಂತರ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತದೆ ಎಂದು ನಂಬಲಾಗಿದೆ. ಕಡಪ ಸಂಸದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಅವರನ್ನು ಆರೋಪಿ ನಂ.1 ಎಂದು ಹೆಸರಿಸಿ ಈಗಾಗಲೇ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ವಿಜಯ್ ಸಾಯಿರೆಡ್ಡಿ ಜಾಮೀನು ಪಡೆದು ಹೊರಬಿದ್ದಿದ್ದರು. ಅದರೆ, ಶುಕ್ರವಾರ(ಏ.20)ದಂದು ಆಂಧ್ರಪ್ರದೇಶ ಹೈಕೋರ್ಟ್ ನ್ಯಾ ಕೆಸಿ ಭಾನು ಅವರು ಜಾಮೀನು ನೀಡಿರುವುದನ್ನು ವಜಾಗೊಳಿಸಿದ್ದರು.
ಆರೋಪಿ ನಂ.2 ಆಗಿರುವ ವಿಜಯ ಸಾಯಿ ರೆಡ್ಡಿಯನ್ನು ಜ.2ರಂದು ಬಂಧಿಸಲಾಗಿತ್ತು. ಚಂಚಲಗೂಡ ಜೈಲಿನಲ್ಲಿದ್ದ ಸಾಯಿ ರೆಡ್ಡಿಗೆ ಏ.13 ರಂದು ಜಾಮೀನು ಸಿಕ್ಕಿತ್ತು. ಜಗನ್ ಒಡೆತನದ ಜಗತಿ ಪಬ್ಲಿಕೇಷನ್ ನ ಉಪಾಧ್ಯಕ್ಷ ಹಾಗೂ ಜಗನ್ ಒಡೆತನದ ಅನೇಕ ಬೇನಾಮಿ ಕಂಪನಿಗಳ ರಹಸ್ಯ ತಿಳಿದಿರುವ ಸಾಕ್ಷಿಯಾಗಿ ಸಿಬಿಐ ಮುಂದೆ ಸಾಯಿ ರೆಡ್ಡಿ ನಿಂತಿದ್ದಾರೆ.
ಸಿಬಿಐಗೆ ಗೆಲುವು? : ಸಾಯಿ ರೆಡ್ಡಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಅವಕಾಶ ದೊರೆತರೂ, ನೀವು ವಿಜಯ ಸಾಯಿರೆಡ್ಡಿಯನ್ನು ಮಾತ್ರ ಏಕೆ ಟಾರ್ಗೆಟ್ ಮಾಡ್ತಾ ಇದ್ದೀರಾ? ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 17 ಜನ ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಪ್ರಮುಖ ಆರೋಪಿ ಜಗನ್ ಮೋಹನ್ ರೆಡ್ಡಿ ಬಂಧಿಸದೇ ಚಾರ್ಜ್ ಶೀಟ್ ಸಲ್ಲಿಸಿದ್ದು ಏಕೆ? ಎಂದು ಕೋರ್ಟ್ ಕೇಳಿದ ಪ್ರಶ್ನೆ ಇನ್ನೂ ಸಿಬಿಐ ಅಧಿಕಾರಿಗಳ ಕಿವಿಯಲ್ಲಿ ಗುಂಯ್ ಗುಡುತ್ತಿದೆ. ಜಗನ್ ಬಂಧಿಸುವ ಏಕೈಕ ಸುವರ್ಣ ಅವಕಾಶಕ್ಕೆ ಇನ್ನೂ ಕಾಯುತ್ತಲೇ ಇದ್ದಾರೆ.












Click it and Unblock the Notifications