ಕೆಂಗೇರಿ : ಪತ್ನಿ ಮೇಲೆ ಆಸಿಡ್ ಎಸೆದ ಪತಿರಾಯ
ದಾಳಿಗೆ ತುತ್ತಾದ ಗೌರಮ್ಮ(37) ಅವರನ್ನು ಸಮೀಪದ ಶ್ರೇಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಕೆಂಗೇರಿ ಠಾಣೆ ಪೊಲೀಸರು ಆರೋಪಿ ಕುಮಾರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಗೌರಮ್ಮ ಅವರ ಮೇಲೆ ಆಸಿಡ್ ದಾಳಿ ನಡೆದಿರುವುದು ಆಘಾತ ತಂದಿದೆ ಎಂದು ನೆರೆ ಹೊರೆ ಮನೆಯವರು ಹೇಳಿದ್ದಾರೆ.
ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಗೌರಮ್ಮ ಸುಮಾರು 17 ವರ್ಷಗಳ ಹಿಂದೆ ಪೈಂಟರ್ ಕುಮಾರನನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಕುಣಿಗಲ್ ಮೂಲ ಇವರಿಬ್ಬರು ಮೊದಲಿಗೆ ಮಾಳಗಾಳದಲ್ಲಿ ನೆಲೆಸಿದ್ದರು. ಆದರೆ, ಕಳೆದ ಐದು ವರ್ಷಗಳಿಂದ ದಂಪತಿ ನಡುವೆ ವೈಮನಸ್ಯ ಹೆಚ್ಚಾಗಿತ್ತು. ಗಂಡ, ಮಕ್ಕಳನ್ನು ತೊರೆದ ಗೌರಮ್ಮ ಪ್ರತ್ಯೇಕವಾಗಿ ಕೆಂಗೇರಿ ಬಳಿಯ ದೇವಗೆರೆಯಲ್ಲಿ ವಾಸಿಸತೊಡಗಿದಳು.
ಐದು ವರ್ಷ ಹೆಂಡತಿ ಎಲ್ಲಿದ್ದಾಳೆ ಎಂಬುದು ತಿಳಿಯದೇ ಒದ್ದಾಡಿದ್ದ ಪತಿ ಕುಮಾರ್, ಕೊನೆಗೂ ಗೌರಮ್ಮನ ಮನೆ, ಗಾರ್ಮೆಂಟ್ಸ್ ಪತ್ತೆ ಮಾಡಿದ್ದಾನೆ. ಆಕೆಯನ್ನು ಪುಸಲಾಯಿಸಿ ದುಬಾಸಿಪಾಳ್ಯಕ್ಕೆ ಕರೆದುಕೊಂಡು ಹೋಗಿ ಆಕೆ ಮೇಲೆ ಆಸಿಡ್ ಸುರಿದಿದ್ದಾನೆ. ಶೇ30 ರಷ್ಟು ಸುಟ್ಟಗಾಯದಿಂದ ಬಳಲುತ್ತಿರುವ ಗೌರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ನನ್ನನ್ನು ಬಿಟ್ಟು ಇನ್ನೊಬ್ಬನೊಂದಿಗೆ ಸಂಬಂಧ ಇರಿಸಿಕೊಂಡಿದ್ದಾಳೆ ಎಂಬ ಅನುಮಾನ ಬಂದಿದ್ದರಿಂದ ಅವಳ ಮೇಲೆ ಆಸಿಡ್ ದಾಳಿ ಮಾಡಿದೆ ಎಂದು ಆರೋಪಿ ಕುಮಾರ್ ವಿಚಾರಣೆ ವೇಳೆ ಕೆಂಗೇರಿ ಪೊಲೀಸರಿಗೆ ಹೇಳಿದ್ದಾನೆ.