ಶೋಭಾಗೆ ಸಿಎಂ ಪಟ್ಟ ನೀಡಿ, ಯಡಿಯೂರಪ್ಪ ಬೇಡಿಕೆ

ಆದರೆ, ಹೈಕಮಾಂಡ್ ಗೆ ಯಾಕೋ ಯಡಿಯೂರಪ್ಪ ಅವರನ್ನು ಕುರ್ಚಿ ಹತ್ತಿರಕ್ಕೆ ಬಿಡುತ್ತಿಲ್ಲ. ಇದರಿಂದ ಬೇಸರಗೊಂಡ ಯಡಿಯೂರಪ್ಪ ತಮ್ಮ ಕೊನೆ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಹಾಗಂತ ಬೆಂಗಳೂರಿನ ರಾಜಕೀಯ ಮೊಗಸಾಲೆಗಳಲ್ಲಿ ವದಂತಿ ಹಬ್ಬಿದೆ.
'ಶೋಭಾ ಕರಂದ್ಲಾಜೆಯನ್ನು ಮುಖ್ಯಮಂತ್ರಿ' ಮಾಡಿಬಿಡಿ. ಕರ್ನಾಟಕಕ್ಕೆ ಮೊಟ್ಟಮೊದಲ ಮಹಿಳಾ ಮುಖ್ಯಮಂತ್ರಿ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಹಿಳಾ ರಾಜ್ಯಪಾಲರು ಬಂದರೂ ಮಹಿಳೆಯರಿಗೆ ಮುಖ್ಯಮಂತ್ರಿ ಪದವಿ ದಕ್ಕಲಿಲ್ಲ. ನನ್ನ ಬಗ್ಗೆ ನಂತರ ನಿರ್ಧರಿಸಿ ಎಂದು ಹೈಕಮಾಂಡಿಗೆ ಯಡಿಯೂರಪ್ಪ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ನಮ್ಮ ರಾಜಕೀಯ ಚಿತ್ರಗುಪ್ತ ರೇಸ್ ಕೋರ್ಸ್ ರಸ್ತೆಯಿಂದ ವರದಿ ಮಾಡಿದ್ದಾರೆ.
ಇದೇ ಮೊದಲಲ್ಲ: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಕುತ್ತು ಬಂದಿದ್ದಾಗ ಜುಲೈ 29, 2011 ರಂದು ಹೈಕಮಾಂಡ್ ಮುಂದೆ ಅಶೋಕ್ ಹೋಟೆಲ್ ನಲ್ಲಿ ಕೂತು ಇದೇ ಸಂದೇಶವನ್ನು ಯಡಿಯೂರಪ್ಪ ಅವರು ಕಳುಹಿಸಿದ್ದರು. ನಾನು ರಾಜೀನಾಮೆ ನೀಡಬೇಕಾದರೆ ಶೋಭಾ ಕರಂದ್ಲಾಜೆಯನ್ನು ಸಿಎಂ ಮಾಡಿ ಎಂದಿದ್ದರು.
ಅದರೆ, ನಂತರ ಯಡಿಯೂರಪ್ಪ ಪಟ್ಟದಿಂದ ಕೆಳಗಿಳಿದರು. ಶೆಟ್ಟರ್ ಡಿಸಿಎಂ ಹುದ್ದೆನಾದರೂ ಕೊಡಿ ಎಂದು ದುಂಬಾಲು ಬಿದ್ದಿದ್ದರು. ಡಿಸಿಎಂ ಬೇಕು ಎಂದಾದರೆ ಶೋಭಾಗೆ ಹೋಂ ಮಿನಿಸ್ಟ್ರಿ ನೀಡಬೇಕಾಗುತ್ತದೆ ಏನಂತೀರಾ ಎಂಬ ಸಂದೇಶ ಹೊರಬಿದ್ದಿದ್ದೆ ತಡ, ಅನಂತ್ ಬಳಗ ಅಯ್ಯೋ ಡಿಸಿಎಂ ಹುದ್ದೆನೇ ಬೇಡ ಎಂದು ಪ್ಲೇಟ್ ಬದಲಾಯಿಸಿತ್ತು. ಈಗ ಕಾಲ ಬದಲಾಗಿದೆ ಶೆಟ್ಟರ್ ಅವರು ಯಡಿಯೂರಪ್ಪ ಜೊತೆ ಲಿಂಗ ಮೆಚ್ಚಿ ಹೌದು ಹೌದು ಎನ್ನಬೇಕು ಎಂಬಂತೆ ಒಡನಾಡಿಯಾಗಿದ್ದಾರೆ.
ಸದಾ ಯಕ್ಷಗಾನ ವರಸೆ: ಅಂದು ಶೋಭಾ ಸಲಹೆಯಂತೆ ಸದಾನಂದ ಗೌಡರನ್ನು ಪಟ್ಟದಲ್ಲಿ ಕೂರಿಸಲಾಯಿತು. ಯಡಿಯೂರಪ್ಪ ಅವರ ಕೈಗೊಂಬೆಯಾಗಬೇಕಿದ್ದ ಸದಾನಂದ ಗೌಡ, ತಮ್ಮ ಯಕ್ಷಗಾನ ನೈಪುಣ್ಯ ತೋರತೊಡಗಿದಾಗ ಬೆಚ್ಚಿದ ಯಡಿಯೂರಪ್ಪ ಈಗ ದಿಕ್ಕು ಕಾಣದಂತಾಗಿದ್ದಾರೆ.
ಇದರ ಜೊತೆಗೆ ಸದಾನಂದ ಕೈಲಿ ಸಂಪುಟ ವಿಸ್ತರಣೆಯ ಅಸ್ತ್ರವಿದೆ. ಸಂಪುಟ ಸ್ಥಾನ ಬಯಸುವವರು, ಬೇರೆ ಖಾತೆ ಬೇಕಾದವರು ಸದಾನಂದ, ಹೈಕಮಾಂಡ್ ಮಾತು ಕೇಳಲೇಬೇಕು. ಯಡಿಯೂರಪ್ಪ ಮನೆಯಲ್ಲಿ ಟೀ ಕುಡಿದರೂ, ಸದಾನಂದ ಕೊಟ್ಟ ಜೋಳರೊಟ್ಟಿ ತಿನ್ನಲೇಬೇಕಾದ ಅನಿವಾರ್ಯತೆ ಇದೆ.
ಹೀಗಾಗಿ ಯಡಿಯೂರಪ್ಪ ಜೊತೆ 70 ಶಾಸಕರು, 18 ಎಂಎಲ್ ಎ ಗಳು ಕಾಣಿಸಿಕೊಂಡರು ಬಹುತೇಕ ಮಂದಿ ಅವಕಾಶವಾದಿಗಳು ಎಂಬುದು ಯಡಿಯೂರಪ್ಪಗೂ ಗೊತ್ತಿದೆ. ಏಪ್ರಿಲ್ 15ರ ತನಕ ಯಡಿಯೂರಪ್ಪಗೆ ಶುಭ ಸುದ್ದಿ ಸಿಗುವುದು ಕಷ್ಟ ಎಂದು ಆಪ್ತ ಜ್ಯೋತಿಷಿಗಳು ಹೇಳಿದ್ದಾರೆ.












Click it and Unblock the Notifications