ಸುಳ್ಳುಸುದ್ದಿ ಹರಡುವುದನ್ನು ಮಾಧ್ಯಮ ನಿಲ್ಲಿಸಲಿ : ಈಶ್ವರಪ್ಪ
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ, ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ರಾಜನಾಥ್ ಸಿಂಗ್, ಮುರಳಿ ಮನೋಹರ ಜೋಶಿ ಜೊತೆ ಗುರುವಾರ ಎರಡು ಗಂಟೆಗಳ ಕಾಲ ಮುಖ್ಯಮಂತ್ರಿ ಸದಾನಂದ ಗೌಡರ ಜೊತೆಗೂಡಿ ಚರ್ಚೆ ನಡೆಸಿದ ನಂತರ ಹಸನ್ಮುಖಿಯಾಗಿ ಹೊರಬಂದ ಈಶ್ವರಪ್ಪನವರು, ಪಕ್ಷದ ಆಡಳಿತ, ಸಂಘಟನೆ ಬಗ್ಗೆ ಹಿರಿಯರು ಬೆನ್ನುತಟ್ಟಿದ್ದಾರೆ ಎಂದರು. ಸುರೇಶ್ ಕುಮಾರ್, ಗೋವಿಂದ್ ಕಾರಜೋಳ, ಎ ರಾಮದಾಸ್, ಎಸ್ ಎ ರವೀಂದ್ರನಾಥ್ ಜೊತೆಗಿದ್ದರು.
ಮಾ.21ರಂದು ಸದಾನಂದ ಗೌಡರು ಮಂಡಿಸಿದ ಬಜೆಟ್ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿರುವ ಹೈಕಮಾಂಡ್, ಪಕ್ಷದ ಸಂಘಟನೆ ಮತ್ತು ರಾಜ್ಯದಲ್ಲಿನ ಬಿಜೆಪಿ ಆಡಳಿತದ ಬಗ್ಗೆಯೂ ಪ್ರಶಂಸೆ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ನಾಯಕತ್ವದ ಬದಲಾವಣೆ ಇರುವುದಿಲ್ಲ. ಹಿಂದೆಯೂ ಹೇಳಿದ್ದೇವೆ, ಈಗಲೂ ಹೇಳುತ್ತೇವೆ, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ ಎಂದು ಈಶ್ವರಪ್ಪ ನುಡಿದರು.
ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೊರಗೆಲ್ಲ ಸುದ್ದಿ ಹಬ್ಬುತ್ತಿದೆ ಎಂದು ಕೇಳಿ ನಿಜಕ್ಕೂ ಆಶ್ಚರ್ಯವಾಗಿತ್ತು. ಮಾಧ್ಯಮದವರು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಬೇಕು. ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸುವ ಜವಾಬ್ದಾರಿಯುತ ಕೆಲಸ ಮಾತ್ರ ಮಾಧ್ಯಮಗಳು ಮಾಡಬೇಕು ಎಂದು ಈಶ್ವರಪ್ಪ ಖಾರವಾಗಿ ನುಡಿದರು.
ದೆಹಲಿಯಲ್ಲಿರುವ ಯಡಿಯೂರಪ್ಪನವರು ಹಿರಿಯ ನಾಯಕರನ್ನು ಮಧ್ಯಾಹ್ನದ ಮೇಲೆ ಭೇಟಿ ಮಾಡುವ ಸಂಭವನೀಯತೆಯಿದೆ. ಮುಖ್ಯಮಂತ್ರಿ ಪಟ್ಟ ಅಥವಾ ರಾಜ್ಯಾಧ್ಯಕ್ಷ ಪದವಿ ನೀಡಲು ಹಿರಿಯರನ್ನು ಪಟ್ಟುಹಿಡಿಯಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈಶ್ವರಪ್ಪ ಮತ್ತು ಸದಾನಂದ ಗೌಡರಿಗೆ ನೀಡಿರುವ ಆಶ್ವಾಸನೆಯನ್ನು ಗಮನಿಸಿದರೆ ಯಡಿಯೂರಪ್ಪ ಖಾಲಿ ಕೈಯಲ್ಲಿ ಹಿಂದುರಿಗಿ ಬರುವುದು ನಿಶ್ಚಿತ, ಈ ಯುಗಾದಿ ಅವರಿಗೆ ಸಿಹಿಗಿಂತ ಕಹಿಯೇ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.