ಮತದಾರರ ಪ್ರತಿಕ್ರಿಯೆ ಸಿಕ್ಕಿದೆ, ಕೈಗೆ ಜಯ : ಹೆಗ್ಡೆ
'ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ, ಹಗರಣಗಳಿಂದ ಜನ ಬೇಸತ್ತಿದ್ದಾರೆ. ಕಳೆದ ಬಾರಿ ಕ್ಷೇತ್ರ ವಿಂಗಡಣೆಯಾಗಿದ್ದರಿಂದ ಮತಗಳು ಹಂಚಿ ಹೋಗಿತ್ತು ಹಾಗಾಗಿ ಸೋಲುಂಡಿದ್ದೆ. ಆದರೆ, ಈ ಬಾರಿ ಜನರ ಪ್ರತಿಕ್ರಿಯೆ ನೋಡಿ ನನಗೆ ಗೆಲ್ಲುವ ವಿಶ್ವಾಸ ಇಮ್ಮಡಿಸಿದೆ'.
ಸುನಿಲ್ ಕುಮಾರ್ ಅವರ ಹಿಂದಿದ್ದ ಯುವ ಪಡೆ ಈ ಬಾರಿ ಕಾಂಗ್ರೆಸ್ ನತ್ತ ತಿರುಗಿದೆ. ಇದು ಮತಯಾಚನೆ ಪ್ರಚಾರ ಸಂದರ್ಭದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ. ಎಡಪಕ್ಷಗಳು ಜೆಡಿಎಸ್ ಗೆ ಬೆಂಬಲ ನೀಡಲಿ, ಬಿಡಲಿ ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದರು.
ಭೋಜೆಗೌಡ ಪ್ರತಿಕ್ರಿಯೆ: 'ಕ್ಷೇತ್ರದಲ್ಲಿ ಪೂರ್ಣವಾಗಿ ಪ್ರವಾಸ ಮಾಡಿದ್ದೇನೆ. ಜೆಡಿಎಸ್ ಚಿಕ್ಕಮಗಳೂರಿನಲ್ಲಿ ಪ್ಯಾಪುಲರ್ ಇದೆ. ಆದರೆ, ಈ ಬಾರಿ ಉಡುಪಿ-ಕುಂದಾಪುರ ಕಾರ್ಕಳದಲ್ಲೂ ಜೆಡಿಎಸ್ ಗೆ ಭರ್ಜರಿ ಜನಮನ್ನಣೆ ಸಿಕ್ಕಿದೆ. ಬಿಜೆಪಿ ಪಾಪದ ಕೊಡ ತುಂಬಿದೆ. ಜೆಡಿಎಸ್ ಗೆ ಗೆಲುವು ಖಚಿತ ಎಂದು ಹೇಳಿದರು.
ಸಿಟಿ ರವಿ :ಬಿಜೆಪಿ ಅಭ್ಯರ್ಥಿ ಸುನಿಲ್ ಅವರು ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲವಾದರೂ ಅವರ ಪರವಾಗಿ ರಾಮ -ಲಕ್ಷ್ಮಣರು ಎಂದೇ ಕ್ಷೇತ್ರದಲ್ಲಿ ಖ್ಯಾತಿ ಆಗಿರುವ ಬಿಜೆಪಿ ನಾಯಕ ಸಿಟಿ ರವಿ ಅವರು ಮತದಾನದ ಬಳಿಕೆ ಸುನಿಲ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಪ್ರತಿನಿಧಿಸಿದ ಕ್ಷೇತ್ರ ಇದು. ಸುನಿಲ್ ಅವರು ಎರಡೂ ಜಿಲ್ಲೆಗಳಲ್ಲಿ ಜನಪ್ರಿಯರಾಗಿದ್ದಾರೆ. ಯುವ ಸಮುದಾಯ ಅವರ ಬೆನ್ನ ಹಿಂದಿದೆ. ಬಿಜೆಪಿಗೆ ಹೆಚ್ಚಿನ ಅಂತರದಲ್ಲಿ ಗೆಲುವು ಲಭಿಸಲಿದೆ ಎಂದರು.