ಅಲಿ ಜೊತೆಗೆ ಗಾಲಿ ರೆಡ್ಡಿ ಕೂಡಾ ಮತ್ತೆ ಸಿಬಿಐ ವಶಕ್ಕೆ
ಇದೀಗ ಬಂದ ಸುದ್ದಿ(ಸಮಯ ಸಂಜೆ 4.05 ) : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಅಲಿ ಅವರ ಬಂಧನ ಅವಧಿ ವಿಸ್ತರಣೆಗೊಂಡ ನಂತರ, ಜನಾರ್ದನ ರೆಡ್ಡಿ ಅವರ ಬಂಧನ ಅವಧಿಯನ್ನು 4 ದಿನಗಳವರೆಗೆ ವಿಸ್ತರಿಸಲಾಗಿದೆ. ಮುಂದಿನ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಲಾಗಿದೆ.
ನಗರದ ಸಿಟಿ ಸಿವಿಎಲ್ ಕೋರ್ಟ್ ಆವರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇತ್ತೀಚೆಗೆ ಗಲಭೆ ನಡೆದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೋರ್ಟ್ ವಿಚಾರಣೆ ನಡೆಸಲಾಯಿತು. ನ್ಯಾಯಾಲಯದ ಸುತ್ತಮುತ್ತಾ 500 ಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿ, ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ.
ಬೆಂಗಳೂರು ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರನ್ನು ಮಾ.12ರ ತನಕ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿತ್ತು.
ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್ ಅವರಿಂದ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಹಾಗಾಗಿ ವಿಚಾರಣೆ ನಡೆಸಲು ಹೆಚ್ಚಿನ ಕಾಲಾವಕಾಶ ನೀಡಬೇಕು. ಕಸ್ಟಡಿ ಅವಧಿಯನ್ನು 15 ದಿನಗಳವೆಗೂ ವಿಸ್ತರಿಸುವಂತೆ ಎಂದು ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಅರ್ಜಿ ಸಲ್ಲಿಸಿದೆ.
ಗಾಲಿ ರೆಡ್ಡಿ ಅವರನ್ನು ಕೂಡಾ ಸಿಬಿಐ ವಶಕ್ಕೆ ನೀಡುವುದು ಅಥವಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವ ಬಗ್ಗೆ ಸೋಮವಾರ ಸಂಜೆ ವೇಳೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಹೈಕೋರ್ಟ್ ಗೆ ರೆಡ್ಡಿ ಮೊರೆ: ಈ ನಡುವೆ ಸಿಬಿಐ ಕಸ್ಟಡಿಯನ್ನು ಪ್ರಶ್ನಿಸಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ(ಮಾ.12) ನಡೆದಿದೆ. ಸಿಬಿಐಗೆ ನೋಟಿಸ್ ನೀಡಿರುವ ಹೈಕೋರ್ಟ್, ಮಾ.14ಕ್ಕೆ ವಿಚಾರಣೆಯನ್ನು ಮುಂದೂಡಿದೆ.