ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್

ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಆಗುತ್ತಾರೋ, ಅಥವಾ ಅಖಿಲೇಶ್ ಯಾದವ್ ಆಗುತ್ತಾರೋ ಎಂಬ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದೆ. ಶನಿವಾರ 11 ಗಂಟೆಗೆ ನಡೆದ ಸಮಾಜವಾದಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಅಖಿಲೇಶ್ ಯಾದವ್ ಅವರ ಹೆಸರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಪ್ರಸ್ತಾಪಿಸಲಾಯಿತು ಮತ್ತು ಸರ್ವಾನುಮತದಿಂದ ಅಂಗೀಕಾರವಾಯಿತು.
ಅಖಿಲೇಶ್ ಅವರಿಗೆ ರಾಜಕೀಯದಲ್ಲಿ ಅಷ್ಟೊಂದು ಅನುಭವವಿಲ್ಲದ ಕಾರಣ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಹಿರಿಯ ನಾಯಕ ಆಜಂ ಖಾನ್ ಮತ್ತಿತರರು ಸಮ್ಮತಿ ವ್ಯಕ್ತಪಡಿಸಿರಲಿಲ್ಲ. ಆದರೆ, ಮುಲಾಯಂ ಅವರು ಆಜಂ ಅವರ ಮನವೊಲಿಸಿದ ಮೇಲೆ ಎಲ್ಲವೂ ಸುಗಮವಾಯಿತು. ಸೋಮವಾರ, ಮಾ. 12ರಂದು ಅಖಿಲೇಶ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಹೊಡೆದಾಟ, ಒಬ್ಬನ ಸಾವು : ಅಖಿಲೇಶ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಮೊದಲು, ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಸಮಾಜವಾದಿ ಪಕ್ಷ ಮತ್ತು ಸೋತಿರುವ ಬಹುಜನ ಸಮಾಜವಾದಿ ಪಕ್ಷದ ನಡುವೆ ಭಾರೀ ಮಾರಾಮಾರಿಗಳಾಗಿದ್ದು, ಒಬ್ಬ ಮೃತಪಟ್ಟಿದ್ದಾನೆ ಮತ್ತು ಹಲವರು ಗಾಯಗೊಂಡಿದ್ದಾರೆ. ಚುನಾವಣೆಯಾದ ನಂತರ ಇಲ್ಲಿಯವರೆಗೆ 7 ವರ್ಷದ ಬಾಲಕ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ.












Click it and Unblock the Notifications