ವಕೀಲರು, ಪತ್ರಕರ್ತರ ಸಂಘರ್ಷ ಇಂದೇನಾಗುವುದೋ?

ಇದೇ ವೇಳೆ 10ಕ್ಕೂ ಹೆಚ್ಚು ಪತ್ರಕರ್ತ ಸಂಘಟನೆಗಳೂ ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದನ್ನು ವಿರೋಧಿಸಿ, ಬೀದಿಗಿಳಿಯಲಿದ್ದಾರೆ. ಒಟ್ಟಿನಲ್ಲಿ ಜನವರಿ 17ರಂದು ವಕೀಲರು ಮತ್ತು ಪೊಲೀಸರ ಮಧ್ಯೆ ನಡೆದಂತಹ ಸಂಘರ್ಷ ಪುನರಾವರ್ತನೆಯಾಗುವ ಲಕ್ಷಣಗಳಿವೆ. ಆದ್ದರಿಂದ ರಾಜಧಾನಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೇರಿದಂತೆ ಏನೆಲ್ಲ ಆಗುವುದೋ ಕಾದುನೊಡಬೇಕಿದೆ.
ಕಟ್ಟೆಚ್ಚರ: ಆದರೆ ವಕೀಲರು ಯಾವ ಸ್ಥಳದಲ್ಲಿ, ಯಾವ ವೇಳೆ ಪ್ರತಿಭಟನೆ ನಡೆಸಲಿದ್ದಾರೆ ಎಂಬುದನ್ನು ಗೌಪ್ಯವಾಗಿಟ್ಟಿದ್ದಾರೆ. ಪ್ರತಿಭಟನೆಗೆ ಪೊಲೀಸ್ ಆಯುಕ್ತರ ಅನುಮತಿಯನ್ನು ಇನ್ನೂ ಪಡೆದಿಲ್ಲ. ಜತೆಗೆ ವಿಧಾನಸೌಧ ಸುತ್ತಮುತ್ತ ಈಗಾಗಲೇ ನಿಷೇಧಾಜ್ಞೆ ಜಾರಿಯಿದೆ. ಆದ್ದರಿಂದ ವಕೀಲರು ಯಾವ ದಿಕ್ಕಿನಿಂದ ನುಗ್ಗಿಬರಲಿದ್ದಾರೆ ಎಂಬುದು ತಿಳುದುಬಂದಿಲ್ಲ. ಈ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹೃದಯಭಾಗದಲ್ಲಿ ( ಸಿಟಿ ಸಿವಿಲ್ ಕೋರ್ಟ್ ಆಸುಪಾಸು) ಬಿಗಿ ಭದ್ರತೆ ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 4 DCPಗಳು, 8 ACPಗಳು, 25 Inspector ಗಳು ಮತ್ತು ನೂರಾರು ಪೊಲೀಸರು ವಿಧಾನಸೌಧ ಸುತ್ತಮುತ್ತ ಕಣ್ಗಾವಲು ಇಟ್ಟಿದ್ದಾರೆ.
ಮಿರ್ಜಿ ಎತ್ತಂಗಡಿಗೆ ಆಗ್ರಹ: ಕೆಲವು ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ಖಂಡಿಸುತ್ತೇವೆ. ಆದರೆ, ನ್ಯಾಯಾಲಯದ ಆವರಣದಲ್ಲಿ ಅನುಮತಿ ಇಲ್ಲದೇ ಲಾಠಿ ಚಾರ್ಜ್ ನಡೆಸಲಾಗಿದೆ. ಇದರ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಮತ್ತು ನಗರ ಪೊಲೀಸ್ ಕಮಿಷನರ್ ಕೆ.ಜ್ಯೋತಿ ಪ್ರಕಾಶ್ ಮಿರ್ಜಿ ಅವರ ಕೈವಾಡವಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ವಕೀಲರ ಸಂಘದ ಕೆಎನ್ ಸುಬ್ಬಾರೆಡ್ಡಿ ವಿವರಿಸಿದರು.
ವಿಶೇಷ ಕೋರ್ಟುಗಳ ಸ್ಥಳಾಂತರಕ್ಕೆ ಒತ್ತಾಯ: ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ಪದೇ ಪದೇ ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಘರ್ಷಣೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯಗಳನ್ನು ನಗರ ಸಿವಿಲ್ ನ್ಯಾಯಾಲಯಗಳ ಆವರಣದಿಂದ ಸ್ಥಳಾಂತರಿಸುವಂತೆ ರಾಜ್ಯ ವಕೀಲರ ಪರಿಷತ್ ಸರ್ಕಾರವನ್ನು ಆಗ್ರಹಿಸಿದೆ.












Click it and Unblock the Notifications