ಬರದ ಬಗ್ಗೆ ಬಿಜೆಪಿಗೆ ಚಿಂತೆಯಿಲ್ಲ : ಎಸ್ಸೆಂ ಕೃಷ್ಣ ಕಿಡಿ

ಬೆಂಗಳೂರಿನಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರು ಬೆಂಗಳೂರಿನಲ್ಲಿ ಫೆ.24ರಂದು ನಡೆಸಿರುವ ಚಿಂತನ ಮಂಥನದಲ್ಲಿ ಚಿಂತನೆಯೂ ಇರಲಿಲ್ಲ ಮಂಥನವೂ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಅನೇಕ ಜಿಲ್ಲೆಗಳು ಬರದಿಂದ ಕಂಗಾಲಾಗಿವೆ, ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ, ಬಡಜನತೆಗೆ ತಿನ್ನಲು ಕೂಳಿಲ್ಲ. ಆದರೂ ನಮ್ಮ ರಾಜ್ಯದ ಬಿಜೆಪಿ ನಾಯಕರು ಬರದ ಬಗ್ಗೆ ಮತ್ತು ರೈತರಿಗೆ ಪರಿಹಾರ ಕಲ್ಪಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಕೃಷ್ಣ ಕಿಡಿ ಕಾರಿದರು.
ಕರ್ನಾಟಕದಲ್ಲಂತೂ ಬಿಜೆಪಿ ಸರಕಾರದ ಸ್ಥಿತಿ ಶೋಚನೀಯವಾಗಿದೆ. ಸರಕಾರ ಉಳಿಸಿಕೊಳ್ಳಲು ಇಲ್ಲದ ಹರಸಾಹಸ ಪಡುತ್ತಿದೆ. ಗಡ್ಕರಿ ದೆಹಲಿಯಿಂದ ಬೆಂಗಳೂರಿಗೆ ಬಂದಷ್ಟೇ ವೇಗವಾಗಿ ಮತ್ತೆ ದೆಹಲಿಯನ್ನು ಸೇರಿಕೊಂಡರು. ಇಂಥ ಹದಗೆಟ್ಟ ಸರಕಾರದಿಂದ ಉತ್ತಮ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಮಾತಿನ ಚಾಟಿ ಬೀಸಿದ ಕೃಷ್ಣ, ಕರ್ನಾಟಕದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಅವ್ಯವಹಾರ ಮಾಡಿ ಜೈಲಿಗೆ ಹೋಗಿರಲಿಲ್ಲ. ಯಡಿಯೂರಪ್ಪ ಮಾತ್ರ ಜೈಲಿಗೆ ಹೋಗಿ ಇತಿಹಾಸ ನಿರ್ಮಿಸಿದ್ದಾರೆ ಎಂದು ನುಡಿದರು.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಐಸಿಸಿ ಕೆಲ ಸಚಿವರಿಗೆ ಕೆಲ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ. ಎಸ್ಎಂ ಕೃಷ್ಣ ಅವರಿಗೆ ಬೆಂಗಳೂರು ಮತ್ತು ಮುನಿಯಪ್ಪ ಅವರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಇಂದು ಬೆಂಗಳೂರು ವಿಭಾಗದ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.












Click it and Unblock the Notifications