ವೀರಶೈವ ಸಮಾಜ ಒಡೆಯಲು ಗೌಡ ಷಡ್ಯಂತ್ರ
ಆದರೆ, ವೀರಶೈವರು ಸುಮ್ಮನೆ ಕೂಡುವುದಿಲ್ಲ. ಇಂಥ ಸಂಚಿನ ವಿರುದ್ಧ ವೀರಶೈವ ಮಠಾಧೀಶರು ಸಂಘಟಿತ ಹೋರಾಟ ನಡೆಸಲಿದ್ದಾರೆ ಎಂದು ಮಹಾಶಿವರಾತ್ರಿ ಶುಭದಿನದಂದು ಸಿದ್ದಲಿಂಗ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೆ, ಸದಾನಂದ ಗೌಡರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಹತ್ತಿಕ್ಕಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಯಡಿಯೂರಪ್ಪನವರಿಂದ ಅಧಿಕಾರದ ಗದ್ದುಗೆ ಸದಾನಂದ ಗೌಡರು ಏರಿದ್ದರೂ, ಅವರು ಮಾಜಿ ಪ್ರಧಾನಿ ಜೆಡಿಎಸ್ ನಾಯಕ ದೇವೇಗೌಡರ ಅಣತಿಯಂತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ದೂರಿದರು.
ಇಂಥ ಮುಖ್ಯಮಂತ್ರಿಯನ್ನು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಕುರ್ಚಿಯಿಂದ ಇಳಿಸಬೇಕು ಎಂದು ಸ್ವಾಮೀಜಿ ಕೆಂಡಕಾರಿದರು. ಶಿವರಾತ್ರಿಯಂದು ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಮುಂತಾದವರ ಜೊತೆಗೂಡಿ ಕಾಶಿ ವಿಶ್ವನಾಥನ ದರ್ಶನ ಮಾಡಿ ಬೆಂಗಳೂರಿಗೆ ಯಡಿಯೂರಪ್ಪ ಮರಳಿರುವ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ ಡಿವಿಎಸ್ ವಿರುದ್ಧ ಕಿಡಿ ಕಾರಿದರು.
ಡಿವಿಎಸ್ ಅಪಾರ್ಥ : ಕಾಶಿಯಿಂದ ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಮರಳಿದ ನಂತರ ಸುದ್ದಿಗಾರರೊಂದಿಗೆ ರೇಸ್ಕೋರ್ಸ್ ರಸ್ತೆಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ ಅವರು, ಬಲ ಪ್ರದರ್ಶನ ಕುರಿತಂತೆ ತಾವು ನೀಡಿದ್ದ ಹೇಳಿಕೆಯನ್ನು ಅಪಾರ್ಥ ಮಾಡಿದ್ದಾರೆ ಎಂದಿದ್ದಾರೆ.
ಬಲ ಪ್ರದರ್ಶನ ಮಾಡುವುದಾಗಿ ಹೇಳಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನನ್ನ ಕಾಶಿ ಭೇಟಿ ಬಗ್ಗೆ ನೀಡಿದ್ದ ಅಸಂಬದ್ಧ ಹೇಳಿಕೆಗೆ ಪ್ರತಿಯಾಗಿ. ಮುಂದಿನ ಚುನಾವಣೆಯಲ್ಲಿ ತಮ್ಮ ಬಲ ಏನೆಂದು ತೋರಿಸುತ್ತೇನೆಂದು ಹೇಳಿದ್ದನ್ನು ಸದಾನಂದ ಗೌಡರು ಅಪಾರ್ಥ ಮಾಡಿಕೊಂಡಿದ್ದಾರೆ. ಅವರೊಂದಿಗೆ ಸಮಾಲೋಚಿಸಿ ಗೊಂದಲ ಪರಿಹರಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಮೂರುವರ್ಷ ಬಿಜೆಪಿ ಹೇಗೆ ಆಡಳಿತ ನೀಡಿದೆಯೆಂದು ಜನರು ನೋಡಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯ ಗಮನಿಸಿದ್ದಾರೆ. ನನ್ನಿಂದಲೇ ಬಿಜೆಪಿ ಬೆಳೆದಿದೆ ಮತ್ತು ಅಭಿವೃದ್ಧಿ ಸಾಧ್ಯವಾಗಿದೆಯೆಂದು ಎಲ್ಲೂ ಹೇಳಿಲ್ಲ. ಹಾಗೆಯೆ, ನನ್ನ ಬೆಂಬಲಿಗರೊಂದಿಗೆ ಬಿಜೆಪಿ ವರಿಷ್ಠರೆದುರೇ ಬಲ ಪ್ರದರ್ಶನ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಅವರು ನುಡಿದರು.