ಪುಣ್ಯಕ್ಷೇತ್ರದಲ್ಲಿ ಗಾಂಜಾ ಬಾಬಾಗಳ ದಮ್ ಮಾರೋ ದಮ್
ತಿಂಥಣಿ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಗಾಂಜಾ ಬಾಬಾಗಳು ಪ್ರತಿವರ್ಷ ತಪ್ಪದೆ ಹೊಗೆಯುಗುಳುವ ಕಾಯಕದಲ್ಲಿ ತೊಡಗಿದ್ದಾರೆ. ಈ ಜಾತ್ರೆಯಲ್ಲಿ ಗಾಂಜಾ ಸೇವನೆ ಮಾಡುವುದಕ್ಕೆ ಒಂದು ಸ್ಥಳವಿದೆ. ಅದೇ ಕೈಲಾಸ ಕಟ್ಟೆ. ಈ ಕಟ್ಟೆಯ ಹತ್ತಿರ ಹೋದರೆ ಸಾಕು ಅಲ್ಲಿ ನೂರಾರು ಬಾಬಾಗಳು ಗಾಂಜಾ, ಮತ್ತು ಮದ್ಯಪಾನ ಸೇವನೆ ಮಾಡುತ್ತಾ ತಮ್ಮದೆ ಲೋಕದಲ್ಲಿ ತೇಲುತ್ತಾ ಕುಣಿಯುತ್ತಾ ಮಾತನಾಡುತ್ತಾ ಇರುವುದನ್ನು ನಾವು ಕಾಣಬಹುದು.
ಇವರಿಗೆ ಗಾಂಜಾ ಎಲ್ಲಿಂದ ಬರುತ್ತೆ? ಇದರ ಹಿಂದೆ ಮಾದಕ ವಸ್ತು ಪೂರೈಸುವ ಜಾಲವೇ ಇದೆಯಾ? ಜಿಲ್ಲಾಡಳಿತ ಯಾಕೆ ಕಣ್ಣುಮುಚ್ಚಿ 'ಧ್ಯಾನ'ದಲ್ಲಿ ಕುಳಿತಿದೆ? ವಿದ್ಯಾವಂತರೂ ಯಾಕೆ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ? ಇವೆಲ್ಲ ಚಿದಂಬರ ರಹಸ್ಯಗಳಾಗಿಯೇ ಉಳಿದಿವೆ. ಸರಕಾರವಂತೂ ಉತ್ತರ ಕಂಡುಕೊಳ್ಳುವ ಗೋಜಿಗೇ ಹೋಗಿಲ್ಲ.
ರೋಗ ತೊರೆಯಲು ಗಾಂಜಾ : ನಾನು ಈ ಸ್ಥಳಕ್ಕೆ ಸುದ್ದಿಮಾಡಲು ತೆರಳಿದ್ದೆ. ಆಗ ಒಬ್ಬ ಬಾಬಾನನ್ನು ಮಾತನಾಡಿಸಿದೆ. ಆಗ ಬಾಬ ಹೇಳಿದ್ದು, "ನಾನು ಓದಿದ್ದು ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್. ನನಗೆ ಜೀವನ ಸಾಕಾಗಿ, ಈ ಕಾವಿ ಬಟ್ಟೆಯನ್ನು ಧರಿಸಿ ಸನ್ಯಾಸಿ ಆಗಿದ್ದೇನೆ. ನನ್ನಲ್ಲಿರುವ ರೋಗ ತೊರೆಯಲು ಈ ಗಾಂಜಾ ಸೇದುತ್ತೇನೆ" ಎಂದ.
ಧೂಮಪಾನ ಮತ್ತು ಗಾಂಜಾ ಸೇವನೆ ನಿಷೇಧಿಸಿ ಅದೇಶ ಹೊರಡಿಸಿ ನಾಲ್ಕು ವರ್ಷ (ಅ.2, 2008) ಗತಿಸಿದರೂ ರಾಜ್ಯ ಸರ್ಕಾರ ಈವರೆಗೆ ಅದರ ಸಮರ್ಪಕ ಅನುಷ್ಠಾನಕ್ಕೆ ಪ್ರಯತ್ನ ಮಾಡಿಲ್ಲ. ತಿಂಥಣಿ ಜಾತ್ರೆ ಒತ್ತಟ್ಟಿಗಿರಲಿ, ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆ ಆವರಣ, ಆರೋಗ್ಯ ಸಂಸ್ಥೆ, ಶಿಕ್ಷಣ ಸಂಸ್ಥೆ, ವಿಲಾಸಿ ಸ್ಥಳ, ರೆಸ್ಟೋರೆಂಟ್, ಸಾರ್ವಜನಿಕ ಕಚೇರಿ, ನ್ಯಾಯಾಲಯ ಆವರಣ, ಗ್ರಂಥಾಲಯ, ಸ್ಟೇಡಿಯಂ, ರೈಲ್ವೆ ಮತ್ತು ಬಸ್ ನಿಲ್ದಾಣ, ಮಾರಾಟ ಮಳಿಗೆ, ಚಿತ್ರ ಮಂದಿರ, ಉಪಹಾರ ಮಂದಿರ, ಕಾಫಿ ಹೌಸ್, ಬಾರ್ ಮತ್ತು ಜಾತ್ರೆಗಳಲ್ಲಿ ಧೂಮಪಾನ ಅವ್ಯಾಹತವಾಗಿ ನೆಡೆದುಕೊಂಡು ಬಂದಿದೆ.
ಈ ಎಲ್ಲಾ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಧೂಮಪಾನ ಸೇವನೆ ಮಾಡಿದವರಿಗೆ 200 ರು. ದಂಡ ವಿಧಿಸಲಾಗುವ ಕಾಯ್ದೆ ರೂಪಿಸಿದೆ. ಆದರೆ, ಇದೆಲ್ಲವನ್ನೂ ಮೀರಿ ತಿಂಥಣಿ ಶ್ರೀ ಕ್ಷೇತ್ರದಲ್ಲಿ ರಾಜಾರೋಷವಾಗಿಯೆ ಗಾಂಜಾ ಸೇವನೆ ಮತ್ತು 'ಚಿಯರ್ಸ್" ನಡೆದುಕೊಂಡು ಬಂದಿದೆ. ಇದರಿಂದ ಸಭ್ಯ ನಾಗರಿಕರು ಮತ್ತು ಮಹಿಳೆಯರು ತೀವ್ರ ತೊಂದರೆಗೆ ಮತ್ತು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಂತೂ ಎರಡೂ ಕಣ್ಣು ಬಿಟ್ಟುಕೊಂಡು ಪಿಳಿಪಿಳಿ ನೋಡುತ್ತಿರುತ್ತಾರೆ. ಇದನ್ನು ನಿಯಂತ್ರಿಸಬೇಕಾದ ತಾಲೂಕ್ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ.
ಜಾತ್ರೆ ಮತ್ತು ದೇವಸ್ಥಾನದಿಂದ ಸರ್ಕಾರಕ್ಕೆ ಬರುವ ಆದಾಯವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳು, ಜಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಒಳ್ಳೆಯ ವಾತಾವರಣ, ಸುರಕ್ಷತೆ, ಸ್ವಚ್ಛತೆ ಹಾಗೂ ಸೌಲಭ್ಯಗಳನ್ನು ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಾತ್ರೆಗೆ ಬರುವ ಭಕ್ತಾದಿಗಳು ದೂರಿದ್ದಾರೆ. ಲಕ್ಷಾಂತರ ಜನ ಸೇರುವ ಜಾತ್ರೆಯಲ್ಲಿ ಸಾರ್ವಜನಿಕವಾಗಿಯೆ 'ದಮ್ ಮಾರೋ ದಮ್" ಎಂದು ಕೂಗುತ್ತಾ ಗಾಂಜಾ ಸೇವನೆ ಮಾಡುವ ದೃಶ್ಯ ಸಭ್ಯರಿಗೆ ಅಸಹ್ಯ ಹುಟ್ಟಿಸುವಂತಿದೆ. ಕೂಡಲೇ ಇದನ್ನು ನಿಯಂತ್ರಿಸಬೇಕು ಎಂದು ತಿಂಥಣಿಗೆ ಬರುವ ಭಕ್ತಾಧಿಗಳು ಆಗ್ರಹಿಸಿದ್ದಾರೆ.
ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಜೊತೆಯಲ್ಲಿ ಗಾಂಜಾ ತಂದು ಮೌನೇಶ್ವರ ಸನ್ನಿಧಿಯಲ್ಲಿರುವ ಸಾಧುಗಳಿಗೆ ದಾನದ ರೂಪದಲ್ಲಿ ಸಲ್ಲಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರ ಪ್ರಕಾರ, ಕೆಲವು ಗೌಪ್ಯ ಸ್ಥಳಗಳಲ್ಲಿ ಇಟ್ಟು ಇದನ್ನು ಮಾರಾಟ ಮಾಡಲಾಗುತ್ತಿದೆ. ಗಾಂಜಾ ಮಾರಾಟದ ಅಕ್ರಮ ಜಾಲವೇ ಇರಬಹುದು ಎಂದೂ ಶಂಕಿಸಲಾಗಿದೆ. ಇದನ್ನು ಪತ್ತೆ ಹಚ್ಚಿ ಬರುವ ಭಕ್ತಾದಿಗಳಿಗೆ ತುಸು ನೆಮ್ಮದಿ ವಾತಾವರಣ ಮೂಡಿಸುವಲ್ಲಿ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.