ಸದನದಿಂದ ಗೂಳಿಹಟ್ಟಿಶೇಖರ್ ಅಮಾನತು
ಗೂಳಿಹಟ್ಟಿ ಶೇಖರ್ ಅವರಿಗೆ ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ. ಇದರಿಂದಾಗಿ ಕುಪಿತಗೊಂಡ ಶಾಸಕರು ಸಭಾಧ್ಯಕ್ಷರನ್ನು ಉದ್ದೇಶಿಸಿ ಕಳಂಕಿತ ಸಭಾಧ್ಯಕ್ಷರೇ ಎಂದು ಕರೆದಿದ್ದು ಏಕಾಏಕಿ ಕೋಲಾಹಲಕ್ಕೆ ಕಾರಣವಾಯಿತು. ಇದು ಆಡಳಿತಾರೂಢ ಪಕ್ಷದ ಶಾಸಕರನ್ನು ಕೆರಳಿಸಿತು. ಸದನದಲ್ಲಿ ಹಠಾತ್ತನೇ ಕೋಲಾಹಲ ಉಂಟಾಯಿತು.
ಬಿಜೆಪಿ ಶಾಸಕರು ಎದ್ದು ನಿಂತು ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಆಕ್ಷೇಪಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಸಭಾಧ್ಯಕ್ಷರು ಕೂಡ ಕೆರಳಿ ಕೆಂಡವಾದರು. ಗೂಳಿಹಟ್ಟಿ ಶೇಖರ್ರವರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಇದಕ್ಕೆ ಗೂಳಿಹಟ್ಟಿ ಶೇಖರ್ ಒಪ್ಪದಿದ್ದಾಗ ಅವರನ್ನು ಸದನದಿಂದ ಹೊರಹಾಕುವಂತೆ ಮರ್ಷಲ್ಗಳಿಗೆ ಸೂಚಿಸಿದರು. ಸಭಾಧ್ಯಕ್ಷರ ಈ ಆದೇಶ ಹೊರಬರುತ್ತಿದ್ದಂತೆ ಮಾರ್ಷಲ್ಗಳು ಗೂಳಿಹಟ್ಟಿಯವರ ಆಸನದತ್ತ ದೌಡಾಯಿಸಿದರು.
ಒಂದು ಹಂತದಲ್ಲಿ ಮಾರ್ಷಲ್ಗಳ ಜೊತೆಗೂ ಚಕಮಕಿ ನಡೆಯಿತು. ನಂತರ ಮಾರ್ಷಲ್ಗಳು ಬಲವಂತವಾಗಿ ಗೂಳಿಹಟ್ಟಿಯವರನ್ನು ಸದನದಿಂದ ಹೊರಹಾಕಲು ಯತ್ನಿಸಿದರು. ಈ ವೇಳೆ ಕಪ್ಪುಪಟ್ಟಿಯನ್ನು ಪ್ರದರ್ಶಿಸಿ ಗೂಳಿಹಟ್ಟಿ ಸಭಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ಹೀಗೆ ಘೋಷಣೆ ಕೂಗುತ್ತಿದ್ದಂತೆ ಮಾರ್ಷಲ್ಗಳು ಅವರನ್ನು ಬಲವಂತದಿಂದ ದಬ್ಬಿಕೊಂಡು ಹೊರಹಾಕಿದರು. ಗೂಳಿಹಟ್ಟಿ ಶೇಖರ್ರವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಡಲಾಗಿದೆ. (ಒನ್ಇಂಡಿಯಾ ಕನ್ನಡ)