ಗುಜರಾತ್ ಸಿಎಂ ಮೋದಿಗೆ ಮತ್ತೆ 'ಸುಪ್ರೀಂ' ಎನ್ಕೌಂಟರ್
ನಕಲಿ ಎನ್ಕೌಂಟರುಗಳ ತನಿಖೆಗಾಗಿ ಗುಜರಾತ್ ಸರಕಾರವು ಕಳೆದ ಎಪ್ರಿಲ್ನಲ್ಲಿ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಎಂಬಿ ಷಾ ಅವರನ್ನು ನೇಮಿಸಿದೆ. ನಿಗಾ ಸಮಿತಿಯೊಂದರ ರಚನೆ ಹಾಗೂ ಅದಕ್ಕೆ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಮನಗಂಡಿರುವ ತಾವು ಎರಡು ರಿಟ್ ಅರ್ಜಿಗಳಲ್ಲಿ ಆರೋಪಿಸಲಾಗಿರುವ ಎಲ್ಲ ನಕಲಿ ಎನ್ಕೌಂಟರುಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿಗಾ ಸಮಿತಿಯ ಅಧ್ಯಕ್ಷರಿಗೆ ಸೂಚಿಸುತ್ತಿದ್ದೇವೆ. ಪ್ರತಿ ಪ್ರಕರಣದಲ್ಲಿ ಸತ್ಯ ಬಹಿರಂಗವಾಗುವಂತೆ ಕೊಲಂಕಷ ತನಿಖೆ ನಡೆಸಬೇಕೆಂಬುದು ತಮ್ಮ ಇಚ್ಛೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಸಿ.ಕೆ. ಪ್ರಸಾದ್ ಅವರ ಪೀಠ ಹೇಳಿದೆ.
ಪತ್ರಕರ್ತ ಬಿಜೆ ವರ್ಗೀಸ್ ಹಾಗೂ ಕವಿ ಜಾವೇದ್ ಅಖ್ತರ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ರಿಟ್ ಅರ್ಜಿಗಳಲ್ಲಿ ಕಾಣಿಸಲಾಗಿರುವ ಯಾವುದೇ ಎನ್ಕೌಂಟರ್ ಪ್ರಕರಣದ ಕುರಿತು ಹಿಂದಿನ ಪೊಲೀಸ್ ಹಾಗೂ ಪ್ರಕರಣ ದಾಖಲೆ ಅಥವಾ ಮಾನವ ಹಕ್ಕು ಸಂಸ್ಥೆಗಳಿಂದ ದಾಖಲೆಗಳನ್ನು ಪಡೆಯಲು ನಿಗಾ ಸಮಿತಿಯ ಅಧ್ಯಕ್ಷರು ಮುಕ್ತವಾಗಿದ್ದಾರೆಂದು ನ್ಯಾಯಪೀಠ ತಿಳಿಸಿದೆ.