ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳಾಗಲು ನಾವು ಅರ್ಹರೇ?

1947 ಅಗಸ್ಟ್ 15 ರಂದು ಭಾರತಕ್ಕೆ ಸ್ವತಂತ್ರ ಸಿಕ್ಕಿತು. ನಮ್ಮನ್ನು ನಾವು ಆಳುವ ಅವಕಾಶ ಬಂತು. ನಮ್ಮ ಆಡಳಿತದಲ್ಲಿ ಯಾವ ರೀತಿ ನೀತಿ ನಿಯಮ ಇರಬೇಕು, ನಮ್ಮ ಆಡಳಿತ ಪದ್ದತಿ ಹೇಗಿರಬೇಕು, ಈ ಎಲ್ಲವುಗಳ ಸ್ಪಷ್ಟತೆ ರೂಪುರೇಷೆ ಆ ಸಂದರ್ಭದಲ್ಲಿ ಇರಲಿಲ್ಲ.
ಆಡಳಿತ ವ್ಯವಸ್ಥೆ ನೀತಿ ನಿಯಮ ಹೇಗಿರಬೇಕು ಎಂಬುದರ ಬಗ್ಗೆ ಒಂದು ಮಾರ್ಗಸೂಚಿಯ ಅಗತ್ಯವಿತ್ತು. ಅದಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನ ರಚಿಸಲು ನಿರ್ಧರಿಸಿ ಆ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಲಾಯಿತು. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರವರನ್ನು ಆಯ್ಕೆ ಮಾಡಲಾಯಿತು.
ಸ್ವತಂತ್ರ ಭಾರತಕ್ಕೆಂದು ರಚಿಸಲ್ಪಟ್ಟ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಸ್ವೀಕರಿಸಿತು. ಅಂದಿನಿಂದ ಜನವರಿ 26ನ್ನು ಪ್ರಜಾರಾಜೋತ್ಸವ/ಗಣರಾಜೋತ್ಸವನ್ನಾಗಿ ದೇಶದಲ್ಲೆಡ ಸಂಭ್ರಮಿಸಲಾಗುವುದು.
ಈ ಸಂಭ್ರಮಕ್ಕೆ ಇಂದಿಗೆ 63 ರ ಹರಯ. ಈ ಸಂದರ್ಭದಲ್ಲಿ ನಾವು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಒಮ್ಮೆ ಅವಲೋಕನವನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಇರುವ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ. ಇದೇ ವ್ಯವಸ್ಥೆ ನಮ್ಮಲ್ಲಿಯೂ ಇದೆ ಎಂದು ನಾವು ಹೇಳುತ್ತಿರುವೆವು. ಆದರೇ ವಾಸ್ತವದಲ್ಲಿ ಆರು ದಶಕಗಳ ಅವಧಿಯಲ್ಲಿ ಆಗಿರುವುದು ಏನು? ನಾವು ಬಯಸಿದ್ದು ಏನು?
ನಾವು ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಸ್ಥಿತಿಗೆ ನಾವು ತಲುಪಿರುವೆವು. ಆ ಹಂತಕ್ಕೆ ಹೋಗಿದೆ ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರಭುವನ್ನು ಆರಿಸುವ ವ್ಯವಸ್ಥೆ.
ದುಡ್ಡು ಮತ್ತು ಜಾತಿಗಾಗಿ ದುಡ್ಡು ಮತ್ತು ಜಾತಿಗೊಸ್ಕರ ದುಡ್ಡು ಮತ್ತು ಜಾತಿಯ ಬೆಂಬಲದಿಂದಲ್ಲೇ ಇರುವ ವ್ಯವಸ್ಥೆಯಾಗಿ ಮಾರ್ಪಟಿದೆ ನಮ್ಮ ರಾಜಕೀಯ ವ್ಯವಸ್ಥೆ. ದಲಿತ ಹಿಂದುಳಿದವರ ಏಳ್ಗೆಗೆಗೆಂದು ಜಾರಿಯಾದ ಮೀಸಲಾತಿ ವ್ಯವಸ್ಥೆ ಇಂದು ರಾಜಕೀಯ ಪಕ್ಷಗಳ ಪ್ರಮುಖ ರಾಜಕೀಯ ವಿಷಯವಾಗಿದೆ.
ದಲಿತ ಹಿಂದುಳಿದವರ ಪರಿಸ್ಥಿತಿ ದೇಶದಲ್ಲಿ ಇನ್ನೂ ಸುಧಾರಿಸಿಲ್ಲ. ಸಮಾನತೆಯನ್ನು ಹುಡುಕಬೇಕಾಗಿದೆ. ಶೈಕ್ಷಣಿಕ ಮಟ್ಟ ಸುಧಾರಿಸಿದೆ ಎಂದು ಹೇಳಿಕೊಂಡರು ಶಿಕ್ಷಣ ಎಂಬುದು ದುಡ್ಡಿದ್ದವರ ಸ್ವತಾಗಿರುವುದು.
ಜನಪ್ರತಿನಿಧಿಗಳೇ ಕಾರಣವೇ?: ರಾಜಕೀಯ ಪಕ್ಷಗಳ ನೈತಿಕ ಮೌಲ್ಯ ಎನ್ನುವುದು ಕೇವಲ ಹೇಳಿಕೆಯಾಗಿರುವುದು. ಅಧಿಕಾರ, ಹಣ, ಜಾತಿ ಧರ್ಮದ ಬಲ ಯಾರಿಗೆ ಇದೆಯೋ ಅವರು ಮಾತ್ರ ರಾಜಕೀಯ ಮಾಡುವ ಸ್ಥಿತಿಯಲ್ಲಿ ಇರುವರು. ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಕೊಂಡುಕೊಳ್ಳುವ ಸಾಮಗ್ರಿಯಂತೆ ಯೋಚಿಸುವರು.
ಆಳುವ ಜನಪ್ರತಿನಿಧಿಗಳು ಮಾವನ ಮನೆಗೆ ಹೋಗಿ ಬರುವಂತೆ ಜೈಲಿಗೆ ಹೋಗಿಬರುವುದು. ಅಂತಹ ಜನಪ್ರತಿನಿಧಿಗಳನ್ನು ಸ್ವ್ವಾತಂತ್ರ್ಯಹೋರಾಟ ಮಾಡಿ ಬಂದವರಂತೆ ಬಿಂಬಿಸುವುದು ಈ ಎಲ್ಲವು ನಮ್ಮ ವ್ಯವಸ್ಥೆಯ ಭಾಗವಾಗಿದೆ. ಚುನಾವಣೆಯಲ್ಲಿ ಸರಾಸರಿ 50% ರಷ್ಟು ಮಾತ್ರ ಮತದಾನವಾಗುವುದು ಸಾಮಾನ್ಯವಾಗಿದೆ. ಅಂದರೇ ವ್ಯವಸ್ಥೆಯ ಒಂದು ಭಾಗ ಮತದಾನದಲ್ಲಿಯೇ ಭಾಗವಹಿಸುತ್ತಿಲ್ಲ.
ಇದನ್ನು ನಾವು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವೇ? ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಕ್ಷರ ಜ್ಞಾನ ಇರುವವರು ಸಹಾ ಮತದಾನದಲ್ಲಿ ಭಾಗವಹಿಸುತ್ತಿಲ್ಲ. ಪ್ರಭುವನ್ನು ಆಯ್ಕೆ ಮಾಡುವ ಪ್ರಜೆಗಳಿಗೆ ಚುನಾವಣೆಯಿಂದ ಚುನಾವಣೆಗೆ ಮತದಾನ ಮಾಡುವ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ.
60 ವರ್ಷಕ್ಕೂ ಅಧಿಕ ಪ್ರಜಾಪ್ರಭುತ್ವ ಆಡಳಿತದ ನಮ್ಮ ದೇಶದಲ್ಲಿ ಮೊದಲು ಭೃಷ್ಟ, ಕ್ರಿಮಿನಲ್ ಜನಪ್ರತಿನಿಧಿಗಳ ಸಂಖ್ಯೆ ಬೆರಳಣಿಕೆಯಷ್ಟು ಇತ್ತು, ಇಂದು ಉತ್ತಮ ಜನಪ್ರತಿನಿಧಿಗಳನ್ನು ಬೆರಳಣಿಕೆಯಲ್ಲಿ ಎಣಿಸಬೇಕಾದ ಸ್ಥಿತಿಗೆ ನಾವು ತಲುಪಿರುವೆವು.
ಈ ರೀತಿಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಸಹಾ ಕೇಂದ್ರದ ರಕ್ಷಣಾ ಮಂತ್ರಿ ಎಕೆ ಅಂತೋನಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂತಾದ ಬೆರಳಣಿಕೆಯ ಜನಪ್ರತಿನಿಧಿಗಳು ನಮ್ಮ ದೇಶ ರಾಜ್ಯದಲ್ಲಿ ಇಂದಿಗೂ ತಮ್ಮತನವನ್ನು ಕಾದುಕೊಂಡಿರುವರು ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿದಿರುವರು ಇಂತಹ ಕೆಲವರ ಉದಾಹರಣೆಯೇ ನಮ್ಮ ಭವಿಷ್ಯದ ಪ್ರಜಾಪ್ರಭುತ್ವದ ಆಶಾಕಿರಣವಾಗಿರುವುದು.
ಕೇವಲ ಒಂದೆರಡು ಉತ್ತಮ ಉದಾಹರಣೆಯಿಂದ ಪ್ರಜಾಪ್ರಭುತ್ವದ ಏಳ್ಗೆ ಸಾಧ್ಯವಿಲ್ಲ ಬದಲಾಗಿ ಸದೃಢ ಪ್ರಜಾಪ್ರಭುತ್ವವನ್ನು ರೂಪಿಸಬೇಕಾದ ನಾವು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾಗಲು ಅರ್ಹರೇ? ಎಂಬುದರ ಬಗ್ಗೆ ನಮಗೆ ನಾವೇ ಪ್ರಶ್ನಿಸಿಕೊಂಡು ಮುಂದುವರೆಯುವ ಅಗತ್ಯವಿದೆ.












Click it and Unblock the Notifications