ರೇಣುಕಾಚಾರ್ಯ ಟೆರರಿಸ್ಟ್!:ಸದಾನಂದ ಗೌಡ ಘೋಷಣೆ
ಸಂಪುಟ ಸಭೆ ನಡೆದಿದ್ದಾಗ ಸಚಿವ ಎಂಪಿ ರೇಣುಕಾಚಾರ್ಯ ತಮ್ಮ ಎಂದಿನ ಶೈಲಿಯಲ್ಲಿ ಸದಾನಂದರನ್ನು ಎದುರು ಹಾಕಿಕೊಳ್ಳಲು ಹವಣಿಸಿದರು. ತಮ್ಮ ತಲೆಯಲ್ಲಿ ಅನಾದಿ ಕಾಲದಿಂದಲೂ ಕೊರೆಯುತ್ತಿದ್ದ ವಿಷಯವನ್ನು ತುಂಬಿದ ಸಭೆಯಲ್ಲಿ ನೇರವಾಗಿ ಮುಖ್ಯಮಂತ್ರಿಯನ್ನು ಕೇಳಿಯೇ ಬಿಟ್ಟರು- 'ಮಹಾಸ್ವಾಮಿ ತಾವು ಅಂದು ಬಳ್ಳಾರಿಯಲ್ಲಿ ನಟಿ ಹೇಮಮಾಲಿನಿ ಅವರಿಗೆ ನನ್ನನನ್ನು ಪರಿಚಯಿಸುತ್ತಾ ಇವರು ರೇಣುಕಾಚಾರ್ಯ ಅಂತ ಇವರೊಬ್ಬ ಟೆರರಿಸ್ಟ್ ಎಂದಿದ್ದು ಸರೀನಾ' ಎಂದು ಚಿಕ್ಕ ಮಕ್ಕಳಂತೆ ಗೊಳೋ ಎಂದರು.
ಇದಕ್ಕೆ ತಮ್ಮ ಎಂದಿನ ಕೋಲ್ಗೇಟ್ ನಗೆ ಚೆಲ್ಲಿದ ಸದಾನಂದರು, 'ಅಯ್ಯೋ ಮಂಕೇ. ಅದು ಟೀಕೆ ಅಲ್ಲ. ಹಾಸ್ಯ ಚಟಾಕಿ. ತಮಾಷಿ ಯಾವುದು ಅಂತ ನಿನಗೆ ಗೊತ್ತಾಗೋಲ್ವಾ. ಸರಿ ಬಿಡು, ತಮಾಷಿ ಬೇಡ ಅಂದರೆ ನನಗೇನಂತೆ. ಈಗ ನಮ್ಮ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವಾಗಲೂ ಉಗ್ರಗಾಮಿ ಗುಂಪಿನ ನಾಯಕ ಎನ್ನುತ್ತಿರುತ್ತೇನೆ. ಕಾರಣ ಅವರ ಬಳಿ ಸದಾ 8-10 ಶಾಸಕರು ಇರುತ್ತಾರೆ. ಆದರೆ ಅವರು ಎಂದೂ ನನ್ನ ವಿರುದ್ಧ ಹೇಳಿಕೆ ನೀಡಿಲ್ಲ' ಎಂದು ಪರೋಕ್ಷವಾಗಿ ರೇಣುಕಾಗೆ ಬಾಣಬಿಟ್ಟರು.