ಜಯನಗರ ಬಸ್ ನಿಲ್ದಾಣ ಸ್ಥಳಾಂತರ- ಅವಾಂತರ
ಮಾರೇನಹಳ್ಳಿ ಪೆಟ್ರೋಲ್ ಬಂಕ್ ಇದ್ದ ಜಾಗದಲ್ಲಿ 9ನೇ ಬ್ಲಾಕಿನ ಬಸ್ ನಿಲ್ದಾಣ ಸ್ಥಳಾಂತರಗೊಂಡಿದ್ದು ಶಾಸಕ ವಿಜಯ ಕುಮಾರ್ ಹಾಗೂ ಮಾಜಿ ಮೇಯರ್ ಎಸ್ ಕೆ ನಟರಾಜ್ ಸೊಮವಾರ ಉದ್ಘಾಟಿಸಿದ್ದರು.
ದಿನಕ್ಕೆ ಸುಮಾರು 456 ಟ್ರಿಪ್ ಹಾಗೂ 40 ಶೆಡ್ಯೂಲ್ ನಲ್ಲಿ ಬಿಎಂಟಿಸಿ ವಾಹನಗಳು ಈ ನಿಲ್ದಾಣದಿಂದ ಚಲಿಸಲಿದೆ. ಹಳೆ ನಿಲ್ದಾಣದಿಂದ ಸಂಚಾರ ದಟ್ಟಣೆ, ಸಮಸ್ಯೆ ಅಧಿಕವಾದ ಕಾರಣ ಹೊಸ ಜಾಗಕ್ಕೆ ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು ಎಂದು ಸಂಚಾರ ಇಲಾಖೆ ಪೊಲೀಸರು ಹೇಳಿದ್ದಾರೆ.
ಹಳೆ ನಿಲ್ದಾಣದ ಸುತ್ತಮುತ್ತ ವಾಸಿಸುತ್ತಿರುವ ನಾಗರೀಕರು ರಾತ್ರಿ ಪಾಳೆಯದಲ್ಲಿ ಅಡ್ಡಾದಿಡ್ಡಿ ಬಸ್ ನಿಲುಗಡೆ ಬಗ್ಗೆ ದೂರು ನೀಡಿದ್ದರು. ಬೆಳಗ್ಗೆ ಸಂಚಾರ ಸಮಸ್ಯೆ ಉಂಟಾಗಿ ಎಲ್ಲರಿಗೂ ಕಿರಿಕಿರಿಯಾಗುತ್ತಿತ್ತು.
ಈ ನಿಟ್ಟಿನಲ್ಲಿ ಸ್ಥಳೀಯ ನಿವಾಸಿಗಳು, ಬಿಎಂಟಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಸ್ಥಳಾಂತರವೇ ಸೂಕ್ತ ಎಂದು ತೀರ್ಮಾನಿಸಲಾಯಿತು ಎಂದು ಜಯನಗರ ವಾರ್ಡ್ ನ ಬಿಬಿಎಂಪಿ ಸದಸ್ಯ ಸಿಕೆ ರಾಮಮೂರ್ತಿ ಹೇಳಿದ್ದಾರೆ.
ಸ್ಥಳಾಂತರಕ್ಕೆ ವಿರೋಧ: ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಜೈರಾಮ್ ಅವರು ಬಸ್ ನಿಲ್ದಾಣ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಣ್ಣ ಉದ್ಯಮಿಗಳಿಗೆ, ತಳ್ಳುಗಾಡಿ ವ್ಯಾಪಾರಿಗಳಿಗೆ ಬಸ್ ಸ್ಥಳಾಂತರದಿಂದ ಭಾರಿ ನಷ್ಟವಾಗಲಿದೆ. ನಮ್ಮ ಸಂಘಟನೆ ಸ್ಥಳಾಂತರವನ್ನು ವಿರೋಧಿಸಿ, ಪ್ರತಿಭಟನೆ ನಡೆಸಲು ಯೋಜಿಸಿದೆ ಎಂದಿದ್ದಾರೆ.
ಆದರೆ, ಹೊಸ ನಿಲ್ದಾಣದಲ್ಲಿ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಇದೆ. ಮೆಟ್ರೋ ಸ್ಟೇಷನ್ ಗೂ ಹತ್ತಿರವಾಗುತ್ತೆ ಹಾಗಾಗಿ ಸ್ಥಳಾಂತರಗೊಂಡಿದ್ದು ಒಳ್ಳೆಯದು ಇನ್ನು ಕೆಲವರು ವಾದಿಸುತ್ತಾರೆ. ಟ್ರಾಫಿಕ್ ಪೊಲೀಸರು ಕೂಡಾ ಸ್ಥಳಾಂತರದ ಪರವಾಗಿ ನಿಂತಿದ್ದಾರೆ.