ಬಿಕ್ಕಟ್ಟು ಬಗೆಹರಿಸಲು ವರಿಷ್ಠರೆದಿರು ನಿರಾಣಿ ಸೂತ್ರ
ಇವು ರಾಜ್ಯದಲ್ಲಿ ಹುಟ್ಟಿಕೊಂಡು ಹತೋಟಿ ಮೀರಿ ಬೆಳೆಯುತ್ತಿರುವ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸಲು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಬಿಜೆಪಿ ಹೈಕಮಾಂಡ್ ಮುಂದೆ ಇಟ್ಟಿರುವ ಹೊಸ ರಾಜಿ ಸೂತ್ರ. ಯಡಿಯೂರಪ್ಪ ಪರ ನಿಲುವನ್ನು ಅವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಶನಿವಾರ ಅವರು ರಾಷ್ಟ್ರದ ರಾಜಧಾನಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಿದ್ದಾರೆ. ಯಡಿಯೂರಪ್ಪ ಪರ ಆರ್ ಅಶೋಕ್ ಲಾಬಿ ನಡೆಸಿದ ನಂತರ ಮಾಜಿ ಮುಖ್ಯಮಂತ್ರಿ ಪರ ವಕಾಲತ್ತು ವಹಿಸುತ್ತಿರುವ ಎರಡನೇ ಶಾಸಕ ಮುರುಗೇಶ್ ನಿರಾಣಿ.
ಯಡಿಯೂರಪ್ಪ ಕಳೆದ ನಲವತ್ತು ವರ್ಷಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪನವರು. ಅನೇಕ ಚುನಾವಣೆಗಳನ್ನು ಗೆಲ್ಲಿಸಿಕೊಟ್ಟಿರುವ ಯಡಿಯೂರಪ್ಪನವರಿಗೆ ಉನ್ನತ ಸ್ಥಾನ ನೀಡಲೇಬೇಕು. ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಬೇಕು, ಇಲ್ಲದಿದ್ದರೆ ಸದಾನಂದ ಗೌಡರು ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಬೇಕು. ಹೀಗಾದರೆ ರಾಜ್ಯಕ್ಕೆ ಮತ್ತು ಬಿಜೆಪಿಗೆ ಒಳ್ಳೆಯದು ಎಂಬ ಚಿಂತನೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ ನಿರಾಣಿ.