ಟಿವಿ9 ಜತೆ ಮಧುಬಂಗಾರಪ್ಪ ಹಂಚಿಕೊಂಡ ಮನದಾಳದ ಮಾತುಗಳು

ಇಡೀ ನಾಡಿನ ಜನತೆ ಟಿವಿ9 ಪ್ರಸಾರ ಮಾಡಿದ ಮಧು ಬಂಗಾರಪ್ಪ ಜತೆಗಿನ ಮಾತುಕತೆಯನ್ನು ಕಣ್ಣುಮಿಟುಕಿಸದೇ ನೋಡಿದ್ದಾರೆ. ರಾತ್ರಿಯಿಂದ ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಕುತೂಹಲದ ಸಂಗತಿಯೆಂದರೆ ರಾತ್ರಿಯೆಲ್ಲ ರಾಮಾಯಣ ಕೇಳಿ ಬೆಳಗ್ಗೆ ಎದ್ದು ಮಧು ಬಂಗಾರಪ್ಪ, ವಸಂತ ಕುಮಾರ ಬಂಗಾರಪ್ಪ ಅವರು ಬಂಗಾರಪ್ಪಗೆ ಏನಾಗಬೇಕು ಎಂದು ಮಾರ್ಮಿಕವಾಗಿ ಕೇಳುವಂತಾಗಿದೆ.
ಒಂದು ವಿಷಯ ಸ್ಪಷ್ಟಪಡಿಸುವುದಾದರೆ ಇಲ್ಲಿ ಮಧು ಬಂಗಾರಪ್ಪ ಮಾಡಿದ್ದು ಸರಿ ಎಂದಾಗಲಿ ಅಥವಾ ವಸಂತ ಕುಮಾರ ಬಂಗಾರಪ್ಪ ಮಾಡಿದ್ದು ಸರಿ ಎಂದಾಗಲಿ ಅಥವಾ ಇವರ ತಂದೆ ಬಂಗಾರಪ್ಪ ಮಾಡಿದ್ದೇ ಸರಿ ಎಂದಾಗಲಿ ಫರ್ಮಾನು ಹೊರಡಿಸುವ ದೃಷ್ಟಿಯಿಂದ ಈ ಲೇಖನ ಬರೆಯುತ್ತಿಲ್ಲ.
ಬದಲಿಗೆ 8 ದಶಕಗಳ ತುಂಬು ಜೀವನ ನಡೆಸಿ, ಹಿರಿಯ ಜೀವವೊಂದು ಮರಳಿ ಬಾರದ ಲೋಕ ಸೇರಿಕೊಂಡಿದ್ದನ್ನು ನಿಮಿತ್ತ ಮಾತ್ರವಾಗಿ ಪರಿಗಣಿಸಿದಾಗ... ನಾಡಿನ ಸಾಕ್ಷಿ ಪ್ರಜ್ಞೆಯಾಗಿ ಟಿವಿ9 ಚಾನೆಲ್ ನಡೆಸಿಕೊಟ್ಟ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸುತ್ತಾ, ಬಂಗಾರಪ್ಪ ತಮ್ಮ ಮಕ್ಕಳೊಂದಿಗೆ ತೋಡಿಕೊಂಡಿದ್ದ ಕಂದಕದ ಬಗ್ಗೆ ನಾಡಿನ ಜನರಿಗೆ ತಿಳಿಯ ಹೇಳಬೇಕಾದ ಹೊಣೆಗಾರಿಕೆಯನ್ನು ಸಂಸ್ಕಾರದ ಚೌಕಟ್ಟು ಮೀರದೆ ಯಶಸ್ವಿಯಾಗಿ ನಿಭಾಯಿದೆ ಅಂತ ಹೇಳುತ್ತಲೇ.
ಇಲ್ಲಿ ಅಂತ್ಯ ಸಂಸ್ಕಾರ, ಅಪರ ಕರ್ಮಗಳಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ನಾಡಿನ ಜನತೆ ನೋಡುತ್ತಿರುವಾಗ ಮಾಧ್ಯಮ ಮತ್ತು ಸಂಬಂಧಪಟ್ಟ ವ್ಯಕ್ತಿ (ಮಧು ಬಂಗಾರಪ್ಪ) ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. ಒಂದು ಕಡೆ ತಂದೆಯನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಧುತ್ತನೆ ಎದುರಾದ ಹಿರಿಯ ಸೋದರನ ರಂಪಾಟದ ನಡುವೆ ಸಿಕ್ಕಿ ಹೈರಾಣವಾಗಿದ್ದರೂ ಮಧು ಎಲ್ಲೂ ಸಂಯಮ ಕಳೆದುಕೊಳ್ಳದೆ, ''ವಿಷಯ ಇಷ್ಟೆ'' ಎಂದು ಮನವರಿಕೆ ಮಾಡಿಕೊಟ್ಟ ರೀತಿ ಅಭಿನಂದನೀಯ. ಕೌಟುಂಬಿಕ ಜಗಳ ನಗೆಪಾಟಲಿಗೀಡಾಗದಂತೆ ಜವಾಬ್ದಾರಿಯುತವಾಗಿ ಸಂದರ್ಶನ ಮೂಡಿಬಂತು.
ಚಾನೆಲ್ ಜತೆ ಮಾತನಾಡುವಾಗ ಮಧ್ಯೆ ಮಧ್ಯೆ ಅವರೇ ಹೇಳಿದಂತೆ ನಾಡಿನ ಯುವ ಜನತೆ ತಂದೆ ಮತ್ತು ಮಕ್ಕಳ ಜಗಳವನ್ನು ಕುತೂಹಲದಿಂದ ನೋಡುತ್ತಿರುವಾಗ ತಪ್ಪು ಸಂದೇಶ ರವಾನೆಯಾಗಬಾರದು ಎಂದು ಅವರು ಶಕ್ತಿಮೀರಿ ಸಂಯಮ ತೋರಿದ್ದು ಗಮನೀಯ.












Click it and Unblock the Notifications