ರೆಡ್ಡಿಯ ಭೇಟಿ ಮಾಡದ ಬಿಜೆಪಿ ಬಗ್ಗೆ ರಾಮುಲು ಕಿಡಿಕಿಡಿ

ಶ್ರೀರಾಮಲು ಪಾಳೆಯದೊಂದಿಗೆ ಗುರುತಿಸಿಕೊಂಡಿರುವ ಬಳ್ಳಾರಿಯ ಶಾಸಕರು ಪಕ್ಷದ ವಿಪ್ ಸ್ವೀಕರಿಸಿದ್ದು, ಬಿಜೆಪಿ ಪರವಾಗಿಯೇ ಮತ ಚಲಾಯಿಸುವ ಭರವಸೆ ನೀಡಿದ್ದಾರೆ. ಆದರೂ ಶಾಸಕರಾದ ಗಾಲಿ ಕರುಣಾಕರ ರೆಡ್ಡಿ, ಗಾಲಿ ಸೋಮಶೇಖರ ರೆಡ್ಡಿ, ಸುರೇಶ್ಬಾಬು, ಬಿ. ನಾಗೇಂದ್ರ, ಹಾಲಾಡಿ ಶ್ರೀನಿವಾಸಶೆಟ್ಟಿ, ಜಗದೀಶ್ ಮೆಟಗುಡ್ಡ, ವಿಶ್ವನಾಥ್ ಮಾಮನಿ, ಎಂ.ಕೆ. ಪಟ್ಟಣಶೆಟ್ಟಿ ಮೊದಲಾದವರು ಇನ್ನೂ ವಿಧಾನೌಧಕ್ಕೆ ಆಗಮಿಸಿಲ್ಲ.
ಜನಾರ್ದನ ರೆಡ್ಡಿಯ ಭೇಟಿ ಮಾಡದ ಬಿಜೆಪಿ ನಾಯಕರ ಬಗ್ಗೆ ರಾಮುಲು ಕಿಡಿಕಿಡಿ: ಇದೇ ವೇಳೆ ಒಟ್ಟು ಏಳು ಮಂದಿ ಪಕ್ಷೇತರ ಶಾಸಕರ ಪೈಕಿ ಬಿ. ಶ್ರೀರಾಮುಲು ಮತ ಚಲಾಯಿಸಿದ್ದಾರೆ. ಸಾಕಷ್ಟು ಬೇಸರದೊಂದಿಗೇ ಮತ ಚಲಾವಣೆ ಮಾಡಿರುವ ರಾಮುಲು ಬಳ್ಳಾರಿ ಶಾಸಕರ ನೆರವು ಯಾಚಿಸುವ ಸಂಬಂಧ ಬಿಜೆಪಿಯ ಯಾವೊಬ್ಬ ನಾಯಕನೂ ಚಂಚಲಗೂಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯನ್ನು ಭೇಟಿ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ರಾಮುಲು ಅವರನ್ನು ಹೊರತುಪಡಿಸಿ ಇನ್ನುಳಿದ 6 ಮಂದಿ ಪಕ್ಷೇತರರು ಮುಖ್ಯಮಂತ್ರಿ ಸದಾನಂದಗೌಡರ ಪರವಾಗಿಯೇ ಮತ ಚಲಾಯಿಸಿದ್ದಾರೆ. ಈ ಆರು ಮಂದಿ ಪೈಕಿ ವರ್ತೂರು ಪ್ರಕಾಶ್ ಸಚಿವರಾಗಿದ್ದಾರೆ. ಉಳಿದವರೆಂದರೆ, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಪಿ.ಎಂ. ನರೇಂದ್ರಸ್ವಾಮಿ, ಡಿ. ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್ ಅವರು ಮತದಾನ ಮಾಡಿಯಾಗಿದೆ. ನಾಮನಿರ್ದೇಶಿತ ಸದಸ್ಯ ಡೆರಿಕ್ ಫುಲಿನ್ಫಾ ಅವರಿಗೂ ಮತ ಚಲಾಯಿಸುವ ಅಧಿಕಾರವಿದೆ. ಆದರೆ ಇನ್ನೂ ಅವರು ಮತದಾನಕ್ಕೆ ಆಗಮಿಸಿಲ್ಲ.
ಪಕ್ಷಗಳ ಸಂಖ್ಯಾಬಲ
ಬಿಜೆಪಿ- 120 (ಸ್ಪೀಕರ್ ಸೇರಿ)
ಕಾಂಗ್ರೆಸ್- 71
ಜೆಡಿಎಸ್- 26
ಪಕ್ಷೇತರರು- 07
ನಾಮನಿರ್ದೇಶಿತ- 01
ಒಟ್ಟು- 225
ಚುನಾವಣಾ ವಿವರ
ಮತದಾನ ನಡೆಯುತ್ತಿರುವ ಸ್ಥಳ- ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106.
ಸಮಯ- ಬೆಳಗ್ಗೆ 9ರಿಂದ ಸಂಜೆ 4.
ಫಲಿತಾಂಶ- ಸಂಜೆ 5 ಗಂಟೆಗೆ












Click it and Unblock the Notifications