ಬ್ಲಾಕ್ ಫ್ರೈಡೆ : ದಾವಣೆಗೆರೆಯಲ್ಲಿ ದುರಂತಗಳ ಸರಮಾಲೆ

ಪಟಾಕಿ ಕಾರ್ಖಾನೆಗೆ ಬೆಂಕಿ : ನಗರದ ಪಿಜಿ ಬಡಾವಣೆಯಲ್ಲಿ ಇಂದು ಬೆಳಿಗ್ಗೆ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಓರ್ವ ಸಜೀವವಾಗಿ ಬೆಂದು ಹೋಗಿದ್ದಾನೆ. ಮೃತನನ್ನು ಅಶೋಕ್ (30) ಎಂದು ಗುರುತಿಸಲಾಗಿದೆ. ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲ್ಲಿಕಾರ್ಜುನ ಫೈರ್ ವರ್ಕ್ಸ್ ಪಟಾಕಿ ಕಾರ್ಖಾನೆಯಲ್ಲಿ ಲೈಸೆನ್ಸ್ ಇಲ್ಲದಿದ್ದರೂ ನಂದಿ ಬ್ರಾಂಡಿನ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಅಕಸ್ಮಾತಾಗಿ ಹೊತ್ತಿಕೊಂಡ ಬೆಂಕಿ ಒಬ್ಬನನ್ನು ಬಲಿ ತೆಗೆದುಕೊಂಡಿದೆ. ಕಟ್ಟಡದ ಮಾಲಿಕ ಮನೆಗೆ ಬೀಗ ಹಾಕಿ ಪರಾರಿಯಾಗಿರುವುದು ಅನೇಕ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ನಗರದಲ್ಲಿ ಬೆಂಕಿ ನಂದಿಸಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಬೆಂಕಿ ವ್ಯಾಪಿಸಿಕೊಂಡಿತು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು. ವಿಪರೀತ ಹೊಗೆ ತುಂಬಿಕೊಂಡು ಅಕ್ಕಪಕ್ಕದ ಮನೆಗಳಿಗೆಲ್ಲ ವ್ಯಾಪಿಸಿ ಸಾಕಷ್ಟು ತೊಂದರೆಗೆ ಕಾರಣವಾಯಿತು.
ಬಸ್ ಪಲ್ಟಿ, ಇಬ್ಬರ ಸಾವು : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಆದಾಪುರ ಎಂಬ ಗ್ರಾಮದಲ್ಲಿ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ಸೊಂದು ರಸ್ತೆಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದ್ದರಿಂದ 2 ಸತ್ತು 20 ಜನರು ಗಾಯಗೊಂಡ ಘಟನೆ ಇಂದು ಜರುಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿನಿ ಆತ್ಮಹತ್ಯೆ : ಆಂಧ್ರಪ್ರದೇಶದ ರಾಜಮಂಡ್ರಿ ಮೂಲದ ವಿದ್ಯಾರ್ಥಿನಿಯೋರ್ವಳು ಇಲ್ಲಿನ ಹಾಸ್ಟೆಲ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯನ್ನು ಸಿಂಧು ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇಷ್ಟೆಲ್ಲ ಅನಾಹುತಗಳ ನಡುವೆ ಸಂತಸದ ಸಂಗತಿಯೆಂದರೆ, ದಾವಣಗೆರೆ ಎಕ್ಸ್ ಪ್ರೆಸ್ ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.












Click it and Unblock the Notifications