ಇನ್ನು ನಾಲ್ಕೇ ದಿನದಲ್ಲಿ ಮಡೆಸ್ನಾನಕ್ಕೆ ನಿಷೇಧ: ಸರಕಾರ

ಆದರೆ, ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಈ ಪದ್ಧತಿಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬರ್ಥದಲ್ಲೇ ವಾದ ಮಂಡಿಸಿದ್ದರು ಎಂಬುದು ಗಮನಾರ್ಹ. ಈಗ ಒತ್ತಡ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಡೆಸ್ನಾನ ಪದ್ಧತಿಯನ್ನೇ ನಿಷೇಧಿಸುವ ಬಗ್ಗೆ ಗಂಭೀರ ಚಿಂತನೆ ಆರಂಭಿಸಿದೆ.
ಈ ಮಡೆಸ್ನಾನ ಪದ್ಧತಿಯನ್ನು ಕೇವಲ ಒಂದು ವರ್ಗದ ಜನತೆ ಮಾತ್ರ ಅನುಸರಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ಆಚರಣೆಯ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಮೇಲ್ನೋಟಕ್ಕೂ ಅಸ್ಪೃಶ್ಯತೆ ಆಚರಣೆ ಎಂಬಂತೆ ಕಂಡು ಬರುತ್ತಿದೆ.
ಹೀಗಾಗಿ ಸರಕಾರದ ಅಧೀನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಇತರ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾಸ್ತವಾಂಶದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮಡೆಸ್ನಾನ ಪದ್ಧತಿಯನ್ನು ಕೇವಲ ಅಸ್ಪೃಶ್ಯರು ಮಾತ್ರ ಆಚರಿಸುತ್ತಾರೆಯೇ ಅಥವಾ ಇತರ ಸಮುದಾಯದವರೂ ಆಚರಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ವರದಿಯಲ್ಲಿ ತಿಳಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಈ ವರದಿ ಕೈಸೇರಿದ ನಂತರ ಸರ್ಕಾರ ಮಡೆಸ್ನಾನ ಪದ್ಧತಿಯನ್ನು ರದ್ದುಪಡಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದರು.
ಮಡೆಸ್ನಾನ ಪದ್ಧತಿ ಬಗ್ಗೆ ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದ್ದ ಹಿಂದುಳಿದ ವರ್ಗಗಳ ಸಂಘಟನೆಯೊಂದರ ಮುಖ್ಯಸ್ಥರೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಅಲ್ಲದೆ, ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.












Click it and Unblock the Notifications