ಕೌರವರಿಗೆ ಸೋಲು, ಗೆಲುವು ನನ್ನದೇ: ಶ್ರೀರಾಮುಲು
ನನ್ನ ಪರವಾಗಿ ಬರಲಿರುವ ಫಲಿತಾಂಶ ನನ್ನ ಮುಂದಿನ ರಾಜಕೀಯ ನಡೆಗೆ ಮುನ್ನುಡಿ ಹಾಕಲಿದೆ. ನನ್ನನ್ನು ಮತ್ತೆ ಶಾಸಕನನ್ನಾಗಿ ನೋಡಲು ಕ್ಷೇತ್ರದ ಜನತೆ ಬಯಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ತಲೆಬಾಗಿ ಜನಪರ ಕೆಲಸ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳು ನನ್ನ ವಿರುದ್ದ ಪ್ರಚಾರದ ಆಖಾಡಕ್ಕೆ ಇಳಿದರು. ಆದರೂ ಕ್ಷೇತ್ರದ ಜನತೆ ನನ್ನ ಪರವಾಗಿ ಮತ ಚಲಾಯಿಸಿದ್ದಾರೆನ್ನುವ ಅದಮ್ಯ ವಿಶ್ವಾಸವನ್ನು ಹೊಂದಿದ್ದೇನೆ. ನನ್ನನ್ನು ಮತ್ತು ಜನಾರ್ಧನ ರೆಡ್ಡಿಯವರನ್ನು ಸರ್ವಾಧಿಕಾರಿ ಸದ್ದಾಂ ಹುಸೇನ್, ಗಡಾಫಿ ಮುಂತಾದವರಿಗೆ ಹೋಲಿಸಿದ ರಾಜಕೀಯ ನಾಯಕರುಗಳಿಗೆ ಈ ಮರುಚುನಾವಣೆಯ ಫಲಿತಾಂಶ ಸೂಕ್ತ ಉತ್ತರ ನೀಡಲಿದೆ ಎಂದು ರಾಮುಲು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕುರುಕ್ಷೇತ್ರ ಯುದ್ದದಲ್ಲಿ ಪಾಂಡವರು ಜಯ ಸಾಧಿಸಿದಂತೆ ನಾನು ಗೆಲ್ಲುತ್ತೇನೆ. ಕೌರವರು ಎಸ್ಟೇ ಪ್ರಯತ್ನ ಪಟ್ಟರೂ ಯುದ್ದದಲ್ಲಿ ಗೆಲ್ಲಲಾಗಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಥೆ ಕೂಡಾ ಹೀಗೆ ಆಗಲಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಶ್ರೀರಾಮುಲು ಸವಾಲೆಸಿದ್ದಾರೆ.