ಬಿಜೆಪಿಗೆ ವಾಪಸಿಲ್ಲ; 'ಸ್ವಾಭಿಮಾನಿ' ಹೊಸ ಪಕ್ಷ: ರಾಮುಲು ಪುನರುಚ್ಚಾರ

ಅಂಬೇಡ್ಕರ್, ಗಾಂಧೀಜಿ ಅವರ ತತ್ತ್ವ ಸಿದ್ಧಾಂತಗಳ ಮಾರ್ಗದಲ್ಲಿ ಈ ಹೊಸ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಮತದಾನದ ವೇಳೆ ಸುದ್ದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು. ಅಂದಹಾಗೆ, 11.30 ರವರೆಗೂ ಶೇ. 35ರಷ್ಟು ಮತದಾನ ನಡೆದಿದೆ.
ಈ ಭಾಗದ ಜನತೆ ಬದಲಾವಣೆಯನ್ನು ಬಯಸುತ್ತಿದ್ದು, ಉಪ ಚುನಾವಣೆಯ ಗೆಲುವಿನ ಮೂಲಕ ಹೊಸ ಬದಲಾವಣೆಗೆ ನಾಂದಿ ಹಾಡಲಾಗುವುದು ಎಂದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಡುಗಡೆ ನಂತರ ಹೊಸ ಪಕ್ಷಕ್ಕೆ ಸ್ಪಷ್ಟ ರೂಪ ಕೊಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಆದ್ದರಿಂದ ಉತ್ತರ ಕರ್ನಾಟಕ ಭಾಗವನ್ನು ಗಮನದಲ್ಲಿಟ್ಟುಕೊಂಡು ಹೊಸ ಪಕ್ಷ ರಚನೆ ಕುರಿತು ಅನೇಕ ರಾಜಕಾರಣಿಗಳು, ಬುದ್ಧಿಜೀವಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಬಿಜೆಪಿಯ ಹಲವು ಶಾಸಕರು ನಮ್ಮೊಂದಿಗೆ ಬರಲಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
ಇನ್ನಾರು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಖಚಿತ: ಇನ್ನಾರು ತಿಂಗಳಲ್ಲಿ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಬರುವುದು ಖಚಿತ. ಅಲ್ಲಿಗೆ ಮುಂದಿನ ವರ್ಷವನ್ನು ಚುನಾವಣಾ ವರ್ಷ ಎಂದು ಘೋಷಿಸುವುದು ಸೂಕ್ತ. ಆದರೆ, ಈ ಚುನಾವಣೆಯಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು, ಮುಂದಿನ ಒಂದು ವರ್ಷ ಯಾವುದೇ ಅಭಿವೃದ್ಧಿ ಕಾಣುವುದಿಲ್ಲ ಎಂಬ ಅಸಮಾಧಾನ ಕಾಡುತ್ತಿದೆ ಎಂದು ಅವರು ನುಡಿದರು.












Click it and Unblock the Notifications