ಚುನಾವಣೆ ಮುಗಿಯುತ್ತಿದ್ದಂತೆ ಈಶ್ವರಪ್ಪ ಸೋದರ ಗಂಗಾಧರಪ್ಪ ಪದಚ್ಯುತಿ

'ಗಂಗಾಧರಪ್ಪರನ್ನು ಕೆಲವರು ಹಾದಿ ತಪ್ಪಿಸಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಬಳ್ಳಾರಿ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲವೂ ಸ್ಪಷ್ಟವಾಗಲಿದೆ. ಈಶ್ವರಪ್ಪ ಅವರೇ ಪ್ರಕರಣ ಇತ್ಯರ್ಥಪಡಿಸಲಿದ್ದು, ಸುಖಾಂತ್ಯವಾಗಲಿದೆ' ಎಂದು ಬಿಜೆಪಿ ನಗರಸಭಾ ಸದಸ್ಯರೊಬ್ಬರು ತಿಳಿಸಿದ್ದಾರೆ.
ಆದರೆ, ಇನ್ನೂ 6 ತಿಂಗಳ ಕಾಲ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಿ ಎಂದು ಗಂಗಾಧರಪ್ಪ ಪಟ್ಟು ಹಿಡಿದಿದ್ದಾರೆ. ಯಾರ ಮಾತನ್ನೂ ಅವರು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶತಾಯಗತಾಯ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ನಗರಸಭಾ ಸದಸ್ಯರು ನಾನಾ ಒತ್ತಡ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಬಲವಂತವಾಗಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಯತ್ನಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಗಂಗಾಧರಪ್ಪ ಹಾಕಿದ್ದಾರೆನ್ನಲಾಗಿದೆ. ಇದು ಪಕ್ಷದ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ನಗರಸಭಾ ಸದಸ್ಯರು ಗಂಗಾಧರಪ್ಪ ವಿರುದ್ಧ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಗಂಗಾಧರಪ್ಪರ ಬೆಂಬಲಕ್ಕೆ ಯಾವ ಬಿಜೆಪಿ ಸದಸ್ಯರೂ ಇಲ್ಲ. ಈ ಹಿನ್ನೆಲೆಯಲ್ಲಿ ಗಂಗಾಧರಪ್ಪರ ಪದಚ್ಯುತಿಗೆ ಸಹಿ ಸಂಗ್ರಹ ಅಭಿಯಾನ ನಡೆಸಿ ಅದನ್ನು ಮಾಜಿ ಸಿಎಂ ಯಡಿಯೂರಪ್ಪಮತ್ತು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪಗೆ ಸಲ್ಲಿಸಲು ಕೆಲವು ನಗರಸಭಾ ಸದಸ್ಯರು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.












Click it and Unblock the Notifications