ಪೊಲೀಸ್ ಠಾಣೆಯಲ್ಲೇ ಪತ್ನಿಯನ್ನು ಇರಿದು ಕೊಂದ ಪತಿ
ಸದಾ ಜಗಳವಾಡಿಕೊಳ್ಳುತ್ತಿದ್ದ ದಂಪತಿಯನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಲು ಮುಂದಾಗಿದ್ದ ಪೊಲೀಸರಿಗೆ ಈ ಘಟನೆಯಿಂದ ಶಾಕ್ ಆಗಿದೆ. ಮದುರೈನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಸಮಯನಲ್ಲೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದಿಗ್ಭ್ರಮೆಗೊಂಡ ಪೊಲೀಸು: ಈ ದುರ್ಘಟನೆಗೆ ಠಾಣೆಯಲ್ಲಿ ಒಬ್ಬ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಮಹಿಳಾ ಪೊಲೀಸರು ಹಾಗೂ ಇಬ್ಬರು ವಕೀಲರು ಸಾಕ್ಷಿಯಾಗಿದ್ದರು. ಪತ್ನಿಯನ್ನು ಕೊಲ್ಲಲು ಮುಂದಾ ಪತಿಯನ್ನು ತಡೆಯಲು ಯತ್ನಿಸಿದ ಮಹಿಳಾ ಪೇದೆಗೆ ಗಾಯಗಳಾಗಿದೆ. ಮತ್ತೊಬ್ಬ ಪೇದೆ ಕೊಲೆ ದೃಶ್ಯ ಕಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ನಾಗಮಲೈ ಪುದುಕೋಟೈ ಕಡೆ ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿರುವ 43 ವರ್ಷದ ಕಣ್ಣನ್ ಹಾಗೂ 29 ವರ್ಷದ ಮುತ್ತುಲಕ್ಷ್ಮಿ ದಾಂಪತ್ಯದ ಜಗಳ ಈ ರೀತಿ ತಿರುವು ಪಡೆದಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೂ ಕಣ್ಣನ್ ಗೆ ಆಕೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಸದಾ ಕಿತ್ತಾಡುತ್ತಿದ್ದ.
ಮದುರೈಗೆ ಬಂದು ತವರು ಮನೆಯಲ್ಲಿ ಮಕ್ಕಳೊಂದಿಗೆ ನೆಲೆಸಿದ್ದ ಮುತ್ತುಲಕ್ಷ್ಮಿಯನ್ನು ಹುಡುಕಿಕೊಂಡು ಬಂದ ಕಣ್ಣನ್, ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾನೆ. ಆದರೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿದೆ. ಆದರೆ,ಅಲ್ಲೂ ಕೂಡಾ ಜಗಳ ತೆಗೆದ ಕಣ್ಣನ್ ಕೊನೆಗೆ ಆಕೆ ಕೊರಳನ್ನು ಚಾಕುವಿನಿಂದ ಕುಯ್ದು, ಹೊಟ್ಟೆಗೆ ತಿವಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಸಡನ್ ಆಗಿ ನಡೆದ ಘಟನೆಯಿಂದ ದಿಗ್ಭ್ರಮೆಗೊಂಡ ಪೊಲೀಸರು ಅವನು ಎಸ್ಕೇಪ್ ಆಗಿದ್ದು ತಿಳಿಯಲೇ ಇಲ್ಲ. ಮುತ್ತುಲಕ್ಷ್ಮಿ ಇಹಲೋಕದ ಯಾತ್ರೆ ಮುಗಿಸಿದ್ದಾಳೆ. ಕಣ್ಣನ್ ಮತ್ತೆ ಲಾರಿ ಹತ್ತಿ ತನ್ನ ಯಾತ್ರೆ ಮುಂದುವರೆಸಿದ್ದಾನೆ.