ತಿಹಾರ ಜೈಲಿಗೆ ಮತ್ತೊಬ್ಬ ಟೆಲಿಕಾಂ ಅತಿಥಿ ಸುಖರಾಂ
ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ಅವರ ಸರಕಾರದಲ್ಲಿ ಟೆಲಿಕಾಂ ಮಂತ್ರಿಯಾಗಿದ್ದ ಸುಖರಾಂ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿ ಹರ್ಯಾಣಾ ಟೆಲಿಕಾಂ ಕಂಪನಿಗೆ 30 ಕೋಟಿ ರು. ಮೌಲ್ಯದ ಗುತ್ತಿಗೆಯನ್ನು ನೀಡಿದ್ದರು. ಅವರೀಗ ಮತ್ತೊಬ್ಬ ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರನ್ನು ತಿಹಾರ ಜೈಲಿನಲ್ಲಿ ಕೂಡಿಕೊಳ್ಳಲಿದ್ದಾರೆ.
ತಮಗೆ ತೀರ ವಯಸ್ಸಾಗಿರುವುದರಿಂದ ಕೃಪೆ ತೋರಬೇಕೆಂದು ಸುಖರಾಂ ಹೈಕೋರ್ಟನ್ನು ಬೇಡಿಕೊಂಡಿದ್ದರು. ಆದರೆ, ಇಂಥ ಅಪರಾಧವನ್ನೇ ವ್ಯವಹಾರ ಮಾಡಿಕೊಂಡಿರುವ ಭ್ರಷ್ಟಾತಿಭ್ರಷ್ಟ ಸುಖರಾಂಗೆ ಅತೀ ಕಠಿಣ ಶಿಕ್ಷೆ ನೀಡಬೇಕೆಂದು ಸಿಬಿಐ ಹೈಕೋರ್ಟನ್ನು ಆಗ್ರಹಿಸಿತ್ತು.
ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅನೇಕ ಸೆಕ್ಷನ್ ಗಳ ಅಡಿಯಲ್ಲಿ ಅವರ ಮೇಲೆ ಆರೋಪಗಳನ್ನು ಹೊರಿಸಲಾಗಿದೆ. ಅವರ ಜೊತೆ ಹರ್ಯಾಣಾ ಟೆಲಿಕಾಂ ಕಂಪನಿಯ ಚೇರ್ಮನ್ ದೇವಿಂದರ್ ಸಿಂಗ್ ಚೌಧರಿ ವಿರುದ್ಧವೂ ಮೊಕದ್ದಮೆ ದಾಖಲಾಗಿತ್ತು. ಅವರೀಗ ತೀರಿಕೊಂಡಿದ್ದಾರೆ.
ಏಳು ಬಾರಿ ಶಾಸಕ ಮತ್ತು ಮೂರು ಬಾರಿ ಸಂಸದನಾಗಿರುವ ಸುಖರಾಂ ಅವರು 2002ರಲ್ಲಿ ಮತ್ತೊಂದು ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. 2009ರಲ್ಲಿ ಕೂಡ ಅಕ್ರಮ ಸಂಪತ್ತು ಹೊಂದಿದ ಆರೋಪದ ಮೇಲೆ ಅವರನ್ನು ತಪ್ಪಿತಸ್ಥ ಎಂದು ಕೋರ್ಟ್ ಆದೇಶ ಹೊರಡಿಸಿತ್ತು. ಅವರನ್ನು ಕಾಂಗ್ರೆಸ್ಸಿನಿಂದ ಉಚ್ಛಾಟಿಸಲಾಗಿದೆ.