ಜೈಲಿನ ಅನುಭವದ ಬಗ್ಗೆ ಬರೆಯಲಿದ್ದಾರೆ ಯಡಿಯೂರಪ್ಪ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ, ನ.12ರಂದು ತಮ್ಮ ಆಪ್ತ ಶಾಸಕರು, ಕಾರ್ಯಕರ್ತರೊಡನೆ ಸಭೆ ನಡೆಸಿದ ಯಡಿಯೂರಪ್ಪ, ಅಧಿಕಾರ ಕಳೆದುಕೊಂಡು ಜೈಲುವಾಸ ಅನುಭವಿಸಿ ಬಂದ ತಮ್ಮ ಸ್ಥಿತಿಯ ಕುರಿತು ಮತ್ತೆ ಭಾವುಕರಾದರು.
ನ.15ರಿಂದ ಜೈಲು ಪಾಲಾಗಿದ್ದ ಘಳಿಗೆಯಿಂದ ಪರಪ್ಪನ ಅಗ್ರಹಾರದ ಜೈಲು ಜೈಲಿನಂತೆ ಇರಲೇ ಇಲ್ಲ. ಒಂದು ಕ್ಷಣದ ಅನುಭವ ಜೀವನದ ಅನೇಕ ಪಾಠಗಳನ್ನು ಕಲಿಸಿದೆ. ಹಿಂದೆ ಆದ ತಪ್ಪುಗಳು ಮುಂದೆ ಆಗುವುದಿಲ್ಲ. ಮುಂದೆ ಏನೇನು ಆಗುತ್ತದೆ ಎಂದು ನೀವೇ ನೋಡಲಿರುವಿರಿ ಎಂದು ಅವರು ಖಡಕ್ ಮಾತುಗಳನ್ನಾಡಿದರು.
ಇನ್ನು ಮುಂದಿನ ದಿನಗಳು ತಮಗೆ ನಿಜಕ್ಕೂ ಅಗ್ನಿ ಪರೀಕ್ಷೆ ಎಂದು ನುಡಿದ ಅವರು, ಈ ಅಗ್ನಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಎದುರಿಸುವುದಾಗಿ ಹೇಳಿದರು. ಆದರೆ, ತಮ್ಮ ಈ ಸ್ಥಿತಿಯನ್ನು ಮತ್ತೆ ಕಾರ್ಯಕರ್ತರೆದಿರು ಹೇಳಿ ಅವರ ಉತ್ಸಾಹವನ್ನು ಕುಂದಿಸುವುದಿಲ್ಲ ಎಂದು ನುಡಿದರು.
40 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿದ್ದೇನೆ. ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಶ್ರಮಿಸಿದ್ದೇನೆ. ಪಕ್ಷದ ಹಿರಿಯ ನಾಯಕರ ಕಟ್ಟಪ್ಪಣೆಯ ಮೇರೆಗೆ ಅಧಿಕಾರ ತ್ಯಜಿಸಬೇಕಾಯಿತು. ಪಕ್ಷಕ್ಕಾಗಿ ಇಷ್ಟೆಲ್ಲ ಮಾಡಿದ್ದರೂ ನನಗೇಕೆ ಹೀಗಾಯಿತು ಎಂದು ಆತ್ಮವಿಮರ್ಶೆಗಿಳಿದರು ಯಡಿಯೂರಪ್ಪ.
ಇಲ್ಲಿಯವರೆಗೆ ಏನೇ ಆಗಿರಲಿ, ಎಲ್ಲ ಆರೋಪಗಳಿಂದ ಯಶಸ್ವಿಯಾಗಿ ಹೊರಬರುವುದಾಗಿ ಅವರು ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನಾಯಕತ್ವದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನ.20ರಂದು ಪಕ್ಷದ ಹಿರಿಯ ಮುಖಂಡರ ಇಚ್ಛೆಯಂತೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುವುದಾಗಿ ಯಡಿಯೂರಪ್ಪ ಹೇಳಿದರು.












Click it and Unblock the Notifications